ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಕಾಂಗ್ರೆಸ್–ಜೆಡಿಎಸ್ ಪ್ರಾಬಲ್ಯದ ಮೈಸೂರು ಭಾಗದಲ್ಲಿ ಚುನಾವಣಾ ಪ್ರಚಾರಕ್ಕೆ ನಾಂದಿಯಾಡಿದರು.
ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಬೃಹತ್ ಸಮಾವೇಶವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿ ಬಿಜೆಪಿ ಹಾಗೂ ಮೋದಿ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಯಿತು.
45 ನಿಮಿಷ ರಾಜ್ಯ ಸರ್ಕಾರದ ವಿರುದ್ಧ ವಾಕ್ ಪ್ರಹಾರ ನಡೆಸಿದರು. ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರ ಮುಂದಿಡುತ್ತಲೇ ಕಾಂಗ್ರೆಸ್ ಟೀಕಿಸುತ್ತಾ ಸಾಗಿದರು.
‘ಇದು ಕೇವಲ 10 ಪರ್ಸೆಂಟ್ ಅಲ್ಲ; ಅದಕ್ಕಿಂತ ಹೆಚ್ಚಿನ ಪರ್ಸೆಂಟ್ ಸರ್ಕಾರ. ಐಟಿ ದಾಳಿ ವೇಳೆ ಮುಖಂಡರೊಬ್ಬರ ಮನೆಯಲ್ಲಿ ವಶಪಡಿಸಿಕೊಂಡಿರುವ ಡೈರಿಯಲ್ಲಿರುವ ಮಾಹಿತಿಯೇ ಅದಕ್ಕೆ ಸಾಕ್ಷಿ. ಇಂಥವರಿಗೆ ಶಿಕ್ಷೆಯಾಗಬೇಕು. ಇಂಥವರಿಂದ ರಾಜ್ಯದ ಜನರಿಗೆ ಮುಕ್ತಿ ಸಿಗಬೇಕು’ ಎಂದು ರಾಜ್ಯ ಸರ್ಕಾರವನ್ನು ಕುಟುಕಿದರು.
‘ಕಾಮಗಾರಿಗಳಿಗೆ 10 ಪರ್ಸೆಂಟ್ ಕಮಿಷನ್ ಕೇಳುವ ಕಾಂಗ್ರೆಸ್ ಸರ್ಕಾರ ಬೇಕೇ? ಅಭಿವೃದ್ಧಿಗಾಗಿ ಮಿಷನ್ ಇಟ್ಟುಕೊಂಡಿರುವ ಬಿಜೆಪಿ ಸರ್ಕಾರ ಬೇಕೇ’ ಎಂದು ಜನರನ್ನು ಪ್ರಶ್ನಿಸಿದರು.
ಕಮಿಷನ್ ಸರ್ಕಾರ ತೊಲಗಿಸಿ ಮಿಷನ್ ಸರ್ಕಾರ ಗೆಲ್ಲಿಸಿ ಎಂದು ಕರೆ ನೀಡಿದರು. ಈ ಬಾರಿ ಬಿಜೆಪಿ... ಈ ಬಾರಿ ಬಿಜೆಪಿ... ಎಂದು ಕನ್ನಡದಲ್ಲಿ ಐದು ಬಾರಿ ಹೇಳಿದರು.