ಜೋಧ್ಪುರ: ಇಲ್ಲಿನ ಕೇಂದ್ರ ಕಾರಾಗೃಹದ ಸಜಾ ಕೈದಿ ಶಂಭುಲಾಲ್ ರೈಗರ್ ಎಂಬಾತ ಚಿತ್ರೀಕರಿಸಿರುವ ಎರಡು ವಿಡಿಯೊ ವೈರಲ್ ಆಗಿದೆ. ತನಗೆ ಸಹ ಕೈದಿಗಳಿಂದ ಜೀವಕ್ಕೆ ಸಂಚಕಾರವಿದೆ ಎಂದು ಆತ ವಿಡಿಯೊದಲ್ಲಿ ಹೇಳಿದ್ದಾನೆ.
ಪಶ್ಚಿಮ ಬಂಗಾಳದ ಮೊಹಮ್ಮದ್ ಅಫ್ರಜುಲ್ ಎಂಬಾತನನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ರೈಗರ್ ಶಿಕ್ಷೆ ಅನುಭವಿಸುತ್ತಿದ್ದಾನೆ. ‘ಲವ್ ಜಿಹಾದ್’ ಕಾರಣವಾಗಿ ತಾನು ಮಾಡಿರುವ ಹತ್ಯೆಯನ್ನು ಆತ ಸಮರ್ಥಿಸಿಕೊಂಡಿದ್ದಾನೆ. ಸಹಕೈದಿ ವಾಸುದೇವ್ ಎಂಬಾತನಿಂದ ಜೀವ ಬೆದರಿಕೆ ಇದೆ ಎಂದೂ ಹೇಳಿದ್ದಾನೆ.
‘ಲವ್ ಜಿಹಾದ್‘ ಗಂಭೀರ ಸಮಸ್ಯೆಯಾಗಿದ್ದು, ಈ ಬಗ್ಗೆ ಪಶ್ಚಿಮ ಬಂಗಾಳ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ ಎಂದು ಆತ ಆರೋಪಿಸಿದ್ದಾನೆ.
ಜೈಲಿನೊಳಗೆ ರೈಗರ್ಗೆ ಮೊಬೈಲ್ ಫೋನ್ ಹೇಗೆ ಸಿಕ್ಕಿತು ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ರಾಜಾಸ್ಥಾನ ಗೃಹಸಚಿವ ಗುಲಾಬ್ ಚಾಂದ್ ಕಟಾರಿಯಾ ಹೇಳಿದ್ದಾರೆ. ಜೈಲಿನಲ್ಲಿ ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿರುವುದಾಗಿ ಕಾರಾಗೃಹ ಆಡಳಿತ ಹೇಳಿದೆ.
ಬಹುಶಃ ಆತ ಸಹ ಕೈದಿಯ ಬಳಿಯಿದ್ದ ಮೊಬೈಲ್ ಬಳಸಿರಬಹುದು ಎನ್ನಲಾಗಿದೆ. ಆದರೆ ಆತನಿಂದಲೂ ಮೊಬೈಲ್ ವಶಪಡಿಸಿಕೊಳ್ಳಲು ಆಗಿಲ್ಲ.