ಬೆಂಗಳೂರು: ‘ಮೀಸಲಾತಿ ವಿಚಾರದಲ್ಲಿ ಮರಾಠ ಸಮುದಾಯಕ್ಕೆ ಅನ್ಯಾಯವಾಗಿದೆ’ ಎಂದು ಜೆಡಿಎಸ್ ಮುಖಂಡ ಪಿ.ಜಿ.ಆರ್.ಸಿಂಧ್ಯ ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸೋಮವಾರ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಲ್ಲಿ ಮಾತನಾಡಿದರು.
‘ರಾಜ್ಯದಲ್ಲಿ ಮರಾಠ ಸಮುದಾಯದವರು ಶೇ 4ರಷ್ಟು ಇದ್ದಾರೆ. ಒಟ್ಟಾರೆ ಮೀಸಲಾತಿಯನ್ನು ಶೇ 50ರಿಂದ ಶೇ 69ಕ್ಕೆ ಹೆಚ್ಚಿಸಬೇಕು. ಆಗ ಎಲ್ಲ ಸಮುದಾಯಕ್ಕೂ ನ್ಯಾಯ ಸಿಗಲಿದೆ’ ಎಂದರು.
‘ಅರಮನೆ ಕಟ್ಟಿ ಭೋಗ ಜೀವನ ಸಾಧಿಸಲು ಶಿವಾಜಿ ಹೋರಾಡಲಿಲ್ಲ. ಪ್ರಜೆಗಳಿಗೆ ಉತ್ತಮ ಆಡಳಿತ ಕೊಡಬೇಕು ಎಂಬ ಹಂಬಲ ಇತ್ತು. ಬರಗಾಲದಲ್ಲಿ ಕಂದಾಯ ಕಟ್ಟುವುದು ಬೇಡ ಎಂದು ಆಜ್ಞೆ ಮಾಡಿದ್ದರು’ ಎಂದು ಹೇಳಿದರು.
ಶಿವಾಜಿಯನ್ನು ಒಂದು ಜನಾಂಗ ಹಾಗೂ ಪ್ರದೇಶಕ್ಕೆ ಸೀಮಿತಗೊಳಿಸಬೇಡಿ ಎಂದು ಪಾಟೀಲ ಪುಟ್ಟಪ್ಪ ಹೇಳುತ್ತಾರೆ. ಪ್ರಪಂಚದಾದ್ಯಂತ ಅನೇಕ ನಾಯಕರು ಶಿವಾಜಿಯಿಂದ ಸ್ಫೂರ್ತಿ ಪಡೆದಿದ್ದಾರೆ ಎಂದರು.