ಮಂಗಳೂರು: ಕರ್ನಾಟಕ ರಾಜ್ಯ ಬಿಎಸ್ಎನ್ಎಲ್ ನಾನ್ ಪರ್ಮನೆಂಟ್ ವರ್ಕರ್ಸ್ ಯೂನಿಯನ್ (ಸಿಐಟಿಯು) ನೇತೃತ್ವದಲ್ಲಿ ಸೋಮವಾರ ನಗರದ ಬಿಎಸ್ಎನ್ಎಲ್ ಪ್ರಧಾನ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಸಿಐಟಿಯು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ಕಾರ್ಮಿಕರ ಜೀವನ ನಿರ್ವಹಣೆ ಮಾಡಲು ಮಾಸಿಕ ₹18ಸಾವಿರ ಕನಿಷ್ಠ ವೇತನ ನಿಗದಿಪಡಿಸಬೇಕು. ಇಎಸ್ಐ ಮತ್ತು ಪಿಎಫ್ ನೀಡಬೇಕೆಂದು ಕಾರ್ಮಿಕರು ಬೇಡಿಕೆ ನೀಡಬೇಕಾದ ಸ್ಥಿತಿ ನಿರ್ಮಾಣವಾಗಿದ್ದು ಈ ದೇಶದ ದುರಂತ. ಕಾರ್ಮಿಕರ ದಿನನಿತ್ಯದ ಬವಣೆಗಳು ಇಂದು ಚರ್ಚೆಯಾಗಬೇಕಿತ್ತು. ಅದು ಆಗುತ್ತಿಲ್ಲ. ಇಂದು ಕಾರ್ಮಿಕರು ಹಲವಾರು ಸಮಸ್ಯೆಗಳಲ್ಲಿ ಮುಳುಗುವಂತಾಗಿದೆ.ಕಾರ್ಮಿಕರ ಎಲ್ಲ ಬೇಡಿಕೆಗಳನ್ನು ರಾಜಕೀಯವಾಗಿ ವಿಮರ್ಶೆ ಮಾಡಲು ಸಾಧ್ಯವಾಗಬೇಕು ಎಂದು ಹೇಳಿದರು.
ಜಿಲ್ಲಾ ಘಟಕದ ಉಪಾಧ್ಯಕ್ಷ ವಸಂತ ಆಚಾರಿ ಮಾತನಾಡಿ, ಕನಿಷ್ಠ ಕೂಲಿಯನ್ನು ಏರಿಕೆ ಮಾಡಬೇಕಾದ ಸರ್ಕಾರ, ಕಾರ್ಮಿಕರ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ. ಕಾನೂನು ಪ್ರಕಾರ ನೀಡಬೇಕಾದ ಸೌಲಭ್ಯಗಳನ್ನು ಜಾರಿ ಮಾಡಲು ಕಾರ್ಮಿಕ ಇಲಾಖೆಗಳು ಕೂಡಾ ಮೌನ ವಹಿಸುತ್ತಿವೆ. ಕಾರ್ಮಿಕರು ಹೋರಾಟದ ದಾರಿ ಹಿಡಿಯುವುದು ಅನಿವಾರ್ಯವಾಗಿದೆ. ಬಿಎಸ್ಎನ್ಎಲ್ ಉಳಿಸಿ, ದೇಶ ಉಳಿಸಿ ಎಂಬ ಬೇಡಿಕೆ ದೇಶಪ್ರೇಮಿ ಹೋರಾಟದ ಬೇಡಿಕೆಯಾಗಿದೆ. ಈ ಹೋರಾಟದ ಬೇಡಿಕೆಗಳು ದೇಶ ರಕ್ಷಣೆ ಒಟ್ಟಿಗೆ ಕಾರ್ಮಿಕರ ನಿರ್ದಿಷ್ಟ ಸಮಸ್ಯೆಗಳಿಗೂ ಸ್ಪಂದಿಸುವಂತಾಗಿದೆ ಎಂದು ಹೇಳಿದರು.
ಬಿಎಸ್ಎನ್ಎಲ್ ಕಾರ್ಮಿಕರ ಮುಂದಾಳು ಬಾಲಕೃಷ್ಣ ಪ್ರಾಸ್ತಾವಿಕವಾಗಿ ಮಾತನಾಡಿ, ಗುತ್ತಿಗೆ ಕಾರ್ಮಿಕರ ಬೇಡಿಕೆಗಳನ್ನು ವಿವರಿಸಿದರು. ಬೇಡಿಕೆ ಗಳ ಮನವಿಯನ್ನು ಬಿಎಸ್ಎನ್ಎಲ್ ಸಂಸ್ಥೆಯ ಮಹಾಪ್ರ ಬಂಧಕರ ಪರ ವಾಗಿ ಬಿ.ಜಿ.ಎಂ.ಸುರೇಶ್ ಅವರಿಗೆ ಸಲ್ಲಿಸಲಾಯಿತು. ಅಲ್ಲಿಂದ ಮೆರವಣಿಗೆ ಹೊರಟು ಕೇಂದ್ರ ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿ ಎದುರು ಪ್ರತಿಭಟನಾ ಪ್ರದರ್ಶನ ಮಾಡಿ ಮನವಿ ಸಲ್ಲಿಸಲಾಯಿತು.
ಉದಯ ಕುಮಾರ್, ಮೋಹನ್ ಉಡುಪಿ, ನಿತ್ಯಾನಂದ ಸುಳ್ಯ, ದೇವಿ ಪ್ರಸಾದ್ ಸುಳ್ಯ, ಸೀನಪ್ಪ ಪುತ್ತೂರು, ದಿನೇಶ್ ಬೆಳ್ತಂಗಡಿ, ಸುನಿಲ್, ಹನೀಫ್ ಬಂಟ್ವಾಳ, ರಮೇಶ್ ಮಂಗಳೂರು ನೇತೃತ್ವ ವಹಿಸಿದ್ದರು. ಉದಯ ಕುಮಾರ್ ಸ್ವಾಗತಿಸಿದರು. ನಿತ್ಯಾನಂದ ವಂದಿಸಿದರು.