ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಯಾಚಿನ್‌ನಲ್ಲಿ ಮೃತಪಟ್ಟ ಯೋಧನ ಅಂತ್ಯಕ್ರಿಯೆ

Last Updated 20 ಫೆಬ್ರುವರಿ 2018, 7:08 IST
ಅಕ್ಷರ ಗಾತ್ರ

ವಿಜಯಪುರ: ಹಿಮಾಲಯದ ಸಿಯಾಚಿನ್‌ ಪ್ರದೇಶದಲ್ಲಿ ಕರ್ತವ್ಯದಲ್ಲಿದ್ದ ಸಂದರ್ಭ ಚಳಿ ತಡೆಯಲಾಗದೆ, ಹೃದಯಾಘಾತಕ್ಕೀಡಾಗಿ ಮೃತಪಟ್ಟಿದ್ದ ವಿಜಯಪುರ ತಾಲ್ಲೂಕಿನ ಉತ್ನಾಳದ ವೀರಯೋಧ ಕಾಶೀನಾಥ ತಳವಾರ ಸೋಮವಾರ ಹುಟ್ಟೂರಿನ ತಾನು ಕಲಿತ ಶಾಲೆ ಆವರಣದಲ್ಲೇ ಪಂಚಭೂತಗಳಲ್ಲಿ ಲೀನವಾದರು.

ಶುಕ್ರವಾರ ರಾತ್ರಿ ಸಿಯಾಚಿನ್ ಪ್ರದೇಶದ ಬಟಲ್ ಎಂಬಲ್ಲಿ ಕರ್ತವ್ಯ ನಿರ್ವಹಿಸಿ, ಸೇನಾ ಶಿಬಿರಕ್ಕೆ ಮರಳುತ್ತಿದ್ದಾಗ ವಿಪರೀತ ಚಳಿಯಿಂದ ಕಾಶೀನಾಥ ಮೃತಪಟ್ಟಿದ್ದರು.

ಸೋಮವಾರ ನಸುಕಿನಲ್ಲಿ ತವರೂರಿಗೆ ಆಗಮಿಸಿದ ವೀರ ಯೋಧನ ಪಾರ್ಥಿವ ಶರೀರವನ್ನು ಬೈಕ್‌ ಮೆರವಣಿಗೆ ಮೂಲಕ ಯುವಕರು ಶಿಸ್ತಿನಿಂದ ಕರೆ ತಂದರು. ಕಾಶೀನಾಥ ಪ್ರಾಥಮಿಕ ಶಿಕ್ಷಣ ಪಡೆದಿದ್ದ ಶಾಲಾ ಆವರಣದಲ್ಲಿ ಅಂತ್ಯ ಸಂಸ್ಕಾರಕ್ಕೆ ಸಿದ್ಧ ಮಾಡಿದ್ದ ಸ್ಥಳಕ್ಕೆ ಮೃತದೇಹವನ್ನು ಗೌರವ ಪೂರ್ವಕವಾಗಿ ಮೆರವಣಿಗೆಯಲ್ಲಿ ಕೊಂಡೊಯ್ದರು.

ಹುಟ್ಟೂರಿಗೆ ಮೃತ ದೇಹ ಬರುತ್ತಿದ್ದಂತೆ ಹೆತ್ತವರು, ಪತ್ನಿ, ಮಕ್ಕಳು, ಸಹೋದರ–ಸಹೋದರಿಯರು ಸೇರಿದಂತೆ ನೆರೆದಿದ್ದ ಅಪಾರ ಜನಸ್ತೋಮದ ದುಃಖ ಒಮ್ಮೆಲೇ ಕಟ್ಟೆಯೊಡೆದು ಕಣ್ಣೀರ ಕೋಡಿ ಹರಿಯಿತು. ತಂದೆ ಕಳೆದುಕೊಂಡ ನೋವಿನಲ್ಲಿದ್ದ ಚಿಣ್ಣರಿಬ್ಬರೂ ದುಃಖಿಸಿದರು.

ಸೇನಾ ಗೌರವ, ಕುಟುಂಬ ಸದಸ್ಯರು, ನೆರೆದಿದ್ದ ಜನಸ್ತೋಮದ ಅಶ್ರುತರ್ಪಣದೊಂದಿಗೆ, ‘ಕಾಶೀನಾಥ ಅಮರ ರಹೇ’ ಎಂಬ ಘೋಷಣೆಗಳೊಂದಿಗೆ ಹುತಾತ್ಮ ಯೋಧ ಪಂಚಭೂತಗಳಲ್ಲಿ ಲೀನವಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT