ತಾಲ್ಲೂಕಿನ ನಾಪೋಕ್ಲು ಸಮೀಪದ ನಾಲಾಡಿಯಲ್ಲಿ ಬಲ್ಲಚಂಡ ಮುತ್ತಣ್ಣ ಅವರಿಗೆ ಸೇರಿದ ಲೈನ್ಮನೆಗೆ ಸೋಮವಾರ ಸಂಜೆ 6 ಗಂಟೆ ಸಮಯದಲ್ಲಿ ಶಸ್ತ್ರಸಜ್ಜಿತ ಮೂವರು ಪುರುಷರು ಭೇಟಿ ನೀಡಿದ್ದರು. ಅಲ್ಲಿ ವಾಸವಿದ್ದ ಪೆಮ್ಮಯ್ಯರಿಂದ ಅಕ್ಕಿ, ಖಾರದ ಪುಡಿ, ಉಪ್ಪು ಮತ್ತಿತರ ಅಡುಗೆ ಸಾಮಗ್ರಿ ಸಂಗ್ರಹಿಸಿದ್ದಾರೆ. ಮನೆಯಲ್ಲಿ ಮಾಡಿದ್ದ ಮಾಂಸದ ಅಡುಗೆಯನ್ನು ಸೇವಿಸಿ, ಮೊಬೈಲ್ ಚಾರ್ಜ್ ಮಾಡಿಕೊಂಡು ರಾತ್ರಿ 10ರ ಸುಮಾರಿಗೆ ಅರಣ್ಯದೊಳಕ್ಕೆ ಹೋಗಿದ್ದಾರೆ.