ಬೆಂಗಳೂರು: ಎಲೆಕ್ಟ್ರಾನಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸುವ ಕಾರ್ಯಕ್ರಮ ನಗರದಲ್ಲಿ ಮಂಗಳವಾರ ನಡೆಯಿತು.
ಸಾರಿಗೆ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇ– ಆಟೊ, ಇ– ಕಾರ್ಟ್ಗಳನ್ನು ವಿವಿಧ ಕಂಪನಿಗಳು ಪ್ರದರ್ಶಿಸಿದವು. ಆಟೊ ಚಾಲಕರು, ಸಾರ್ವಜನಿಕರು ವಾಹನಗಳ ಬಗ್ಗೆ ಮಾಹಿತಿ ಪಡೆದರು. ಇ–ರಿಕ್ಷಾಗಳನ್ನು ಓಡಿಸಿ ಪರೀಕ್ಷಿಸಲು ಅವಕಾಶ ಇತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಾರಿಗೆ ಸಚಿವ ಎಚ್.ಎಂ.ರೇವಣ್ಣ, ‘ಇ– ವಾಹನಗಳನ್ನು ಬಳಸುವುದರಿಂದ ವಾಯು ಮಾಲಿನ್ಯ ಹಾಗೂ ಶಬ್ದ ಮಾಲಿನ್ಯ ತಡೆಯಬಹುದು. ಇವುಗಳ ನಿರ್ವಹಣೆ ಸುಲಭ. ಇ–ವಾಹನ ಬಳಸಲು ಸಾರ್ವಜನಿಕರು ಹಾಗೂ ಆಟೊ ಚಾಲಕರು ಮನಸು ಮಾಡಬೇಕು’ ಎಂದರು.
ಇ– ಆಟೊದಲ್ಲಿ ನಾಲ್ಕು ಪ್ರಯಾಣಿಕರು ಸಂಚರಿಸಬಹುದು. ಇದು ಗಂಟೆಗೆ 25 ಕಿ.ಮೀ ವೇಗದಲ್ಲಿ ಚಲಿಸುತ್ತದೆ ಮತ್ತು 310 ಕೆ.ಜಿ. ತೂಕ ಹೊರಬಲ್ಲವು. ಬ್ಯಾಟರಿಯನ್ನು ಎಂಟು ಗಂಟೆಗಳು ಚಾರ್ಜ್ ಮಾಡಿದರೆ 100 ಕಿ.ಮೀ.ವರೆಗೆ ವಾಹನ ಚಲಿಸಲಿದೆ.
ನಟ ಗುರುನಂದನ್ ಮಾತನಾಡಿ, ‘ಎಲೆಕ್ಟ್ರಾನಿಕ್ ವಾಹನಗಳನ್ನು ಬಳಸಿದರೆ, ಮಾಲಿನ್ಯ ನಿಯಂತ್ರಿಸಬಹುದು. ಪರಿಸರಸ್ನೇಹಿ ಕಾರ್ಯಗಳಲ್ಲಿ ಎಲ್ಲರೂ ಭಾಗಿಯಾಗಬೇಕು. ಸರ್ಕಾರ ಜತೆ ಸಾರ್ವಜನಿಕರು ಕೈಜೋಡಿಸಬೇಕು’ ಎಂದರು.