ಎಚ್.ಡಿ.ಕೋಟೆ/ಸರಗೂರು: ಇಲ್ಲಿನ ಪೊಲೀಸ್ ಠಾಣೆಗಳ ಆವರಣದಲ್ಲಿ ತಾಲ್ಲೂಕಿನಲ್ಲಿಯೇ ಮೊದಲ ‘ಕಲ್ಪವೃಕ್ಷ’ ಪೊಲೀಸ್ ಕ್ಯಾಂಟೀನ್ ಆರಂಭಿಸಿದ್ದು, ಬುಧವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ ಉದ್ಘಾಟಿಸಿದರು.
ಎಚ್.ಡಿ.ಕೋಟೆಯಲ್ಲಿ ಮಾತ ನಾಡಿದ ಅವರು, ಇಲಾಖೆ ಸಿಬ್ಬಂದಿ ಯಲ್ಲದೆ, ಸಾರ್ವಜನಿಕರು, ವಿದ್ಯಾರ್ಥಿ ಗಳೂ ಇಲ್ಲಿಗೆ ಬಂದು ಊಟ ಮಾಡ ಬಹುದು. ಮುಂದಿನ ದಿನಗಳಲ್ಲಿ ಔಷಧ ಮಳಿಗೆ ಮತ್ತು ದಿನಸಿ ಅಂಗಡಿ ಆರಂಭಿಸಲಾಗುವುದು. ಮೊದಲು ಪೊಲೀಸರಿಗೆ ಆದ್ಯತೆ ನೀಡಲಾ ಗುವುದು. ಸಾರ್ವಜನಿಕರೂ ಖರೀದಿ ಮಾಡಬಹುದಾಗಿದೆ ಎಂದರು.
ಎಲ್ಲ ವಿಷಯ ಮತ್ತು ಎಲ್ಲ ಇಲಾಖೆಗೂ ಪೊಲೀಸ್ ಇಲಾಖೆ ಯೊಂದಿಗೆ ನಿಕಟ ಸಂಬಂಧ ಇರುತ್ತದೆ. ಕಾನೂನು ಪುಸ್ತಕದಲ್ಲಿದ್ದರೆ ಸಾಲದು, ಜಾರಿಗೆ ಬರಬೇಕು ಎಂದರು. ಜಿಲ್ಲಾ ಪಂಚಾಯಿತಿ ಸದಸ್ಯ ವೆಂಕಟ ಸ್ವಾಮಿ, ತಹಶೀಲ್ದಾರ್ ಕೃಷ್ಣ, ಪಿಎಸ್ಐ ಅಶೋಕ್, ಸಿಬ್ಬಂದಿಯಾದ ರವಿ, ಗಂಣವೇಲು, ಹರೀಶ್, ಮಹದೇವು, ಸಿದ್ದರಾಜು ಇದ್ದರು.
ಮತ್ತೊಂದೆಡೆ, ಸರಗೂರಿನಲ್ಲಿ ಕ್ಯಾಂಟೀನ್ ಉದ್ಘಾಟಿಸಿ ಮಾತನಾಡಿದ ಎಸ್ಪಿ, ಮೈಸೂರಿನ ಜ್ಯೋತಿನಗರದಲ್ಲಿ ದೊಡ್ಡ ಪ್ರಮಾಣದಲ್ಲಿ ಕ್ಯಾಂಟೀನ್ ಆರಂಭಿಸಲಾಗಿದೆ. ಅದು ಚೆನ್ನಾಗಿ ನಡೆಯುತ್ತಿದೆ. ಇದನ್ನು ಮನಗಂಡು ಪ್ರತಿ ತಾಲ್ಲೂಕಿನಲ್ಲೂ ಆರಂಭಿಸಲು ನಿರ್ಧರಿಸಲಾಗಿದೆ. ಇಲ್ಲಿ ₹ 4ಕ್ಕೆ ಟೀ– ಕಾಫಿ, ₹ 15ಕ್ಕೆ ತಿಂಡಿ ಮತ್ತು ₹ 20ಕ್ಕೆ ಊಟ ದೊರೆಯುತ್ತದೆ. ಇದರಲ್ಲಿ ವ್ಯಾಪಾರದ ಮನೋಭಾವ ಇಲ್ಲ, ಸೇವಾ ಮನೋಭಾವ ಇದೆ. ಕೂಲಿ ಕಾರ್ಮಿಕರು ಹಾಗೂ ಠಾಣೆಗೆ ಬರುವ ಪಿರ್ಯಾದುದಾರರಿಗೆ ಕಡಿಮೆ ಬೆಲೆಗೆ ಇಲ್ಲಿ ಊಟ ಸಿಗುತ್ತದೆ ಎಂದರು.
ಅಪರಾಧ ಇಳಿಮುಖ: ಈ ಮೊದಲು ಸರಗೂರು ಠಾಣಾ ವ್ಯಾಪ್ತಿಯಲ್ಲಿ ವರ್ಷಕ್ಕೆ 300ರಿಂದ 400ಕ್ಕೂ ಹೆಚ್ಚು ಅಪರಾಧ ನಡೆಯುತ್ತಿದ್ದವು. ಆದರೆ, ಬಸವರಾಜು ಪಿಎಸ್ಐ ಆಗಿ ಇಲ್ಲಿಗೆ ಬಂದಾಗಿನಿಂದ ಇಳಿಮುಖವಾಗಿದೆ. ಸದ್ಯ ವರ್ಷಕ್ಕೆ 150 ಅಪರಾಧಗಳು ನಡೆಯುತ್ತಿವೆ. ಇಂಥ ಅಧಿಕಾರಿಗಳು ಇಲಾಖೆಗೆ ಅವಶ್ಯಕ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸರಗೂರು ಕೃಷ್ಣ, ಎಸ್.ಎಲ್.ರಾಜಣ್ಣ, ರವಿಕುಮಾರ್, ಹನುಮ ನಾಯಕ, ಶ್ರೀನಿವಾಸ್, ಸಿದ್ದನಾಯಕ ಮಾತನಾಡಿ, ಸರಗೂರು ತಾಲ್ಲೂಕು ಕೇಂದ್ರ ಆಗಿರುವುದರಿಂದ ಕೂಡಲೇ ಸಿಪಿಐ ಕಚೇರಿ ಪ್ರಾರಂಭಿಸಬೇಕು. ಪಿಎಸ್ಐ ಬಸವರಾಜು ಮಂಡ್ಯಕ್ಕೆ ವರ್ಗಾವಣೆ ಆಗಿದ್ದಾರೆ. ಅವರು ಇಲ್ಲೇ ಕೆಲಸ ಮುಂದುವರಿಸಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಇದೇ ವೇಳೆ ರವಿ ಡಿ.ಚನ್ನಣ್ಣನವರ ಅವರಿಗೆ ಸನ್ಮಾನಿಸಲಾಯಿತು. ಡಿವೈಎಸ್ಪಿ ಎನ್.ಜಿ.ಭಾಸ್ಕರ್ ರೈ, ಎಚ್.ಡಿ.ಕೋಟೆ ಸಿಪಿಐ ಹರೀಶ್ ಕುಮಾರ್ ಮಾತನಾಡಿದರು. ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಎಲ್.ಪದ್ಮಾವತಿ ಗೋಪಾಲ್, ಬೀಚನಹಳ್ಳಿ ಠಾಣೆ ಪಿಎಸ್ಐ ರಾಮಚಂದ್ರನಾಯಕ್, ತಾಲ್ಲೂಕು ನಾಯಕ ಸಮಾಜದ ಅಧ್ಯಕ್ಷ ಶಂಭುಲಿಂಗನಾಯಕ, ನಿವೃತ್ತ ಎಎಸ್ಐ ಬಸವನಾಯಕ ಇತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.