ಪಣಜಿ: ಅನಾರೋಗ್ಯದಿಂದ ಬಳಲುತ್ತಿದ್ದ ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರೀಕರ್, ಗುಣಮುಖರಾಗಿ ಮುಂಬೈನ ಆಸ್ಪತ್ರೆಯಿಂದ ಗುರುವಾರ ಮನೆಗೆ ಮರಳಿದ್ದಾರೆ. ಬಳಿಕ ಒಂದೇ ಗಂಟೆಯಲ್ಲಿ ಸದನಕ್ಕೆ ಹೋದ ಅವರು ಗೋವಾ ಬಜೆಟ್ ಅನ್ನೂ ಮಂಡಿಸಿದ್ದಾರೆ.
ವಿಷಾಹಾರ ಸೇವನೆಯಿಂದ ಅನಾರೋಗ್ಯಗೊಂಡಿದ್ದ ಅವರನ್ನು ಇದೇ 15ರಂದು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನಂತರ ಅವರು ಪ್ಯಾಂಕ್ರಿಯಾ
ಟೈಸಿಸ್ (ಮೇದೋಜೀರಕ ಗ್ರಂಥಿ) ತೊಂದರೆಯಿಂದ ಬಳಲುತ್ತಿರುವ ಬಗ್ಗೆ ಅವರ ಕಚೇರಿಯ ಮೂಲ ತಿಳಿಸಿತ್ತು.
ಬಜೆಟ್ ನಂತರ ಮಾತನಾಡಿದ ಪರ್ರೀಕರ್, ‘ನಾನು ಆರೋಗ್ಯದಿಂದ ಇದ್ದೇನೆ. ಮುಖ್ಯಮಂತ್ರಿಯಾಗಿ ಕರ್ತವ್ಯ ಮುಂದುವರಿಸುತ್ತಿದ್ದೇನೆ. ಆದರೆ ವೈದ್ಯರ ಸಲಹೆಯ ಮೇರೆಗೆ ಕೆಲ ದಿನಗಳ ಮಟ್ಟಿಗೆ ಸಾರ್ವಜನಿಕರೊಂದಿಗೆ ಸಭೆಗಳನ್ನು ನಡೆಸುವುದಿಲ್ಲ’ ಎಂದಿದ್ದಾರೆ.
‘ಪರ್ರೀಕರ್ ಗೋವಾಕ್ಕೆ ವಾಪಸಾಗಿರುವುದು ತುಂಬಾ ಸಂತೋಷದ ಸಂಗತಿ. ಅವರು ತುಂಬಾ ಗಟ್ಟಿ ಮನುಷ್ಯ. ಆದ್ದರಿಂದ ಶೀಘ್ರದಲ್ಲಿ ಗುಣಮುಖರಾಗಿದ್ದಾರೆ’ ಎಂದು ಗೋವಾದ ಉಪ ಸ್ಪೀಕರ್ ಮೈಕೆಲ್ ರೋಬೊ ಪ್ರತಿಕ್ರಿಯಿಸಿದ್ದಾರೆ.