ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಯಿತ್ರಿಯರ ಭಾವಲೋಕಯಾನ ‘ನನ್ನ ಕವಿತೆ ನನ್ನ ಹಾಡು’

Last Updated 23 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಭಾವನೆಗಳ ಅಭಿವ್ಯಕ್ತಿಗೆ ಕವಿತೆ ಪ್ರಬಲ ಮಾಧ್ಯಮ. ಈ ಮೂಲಕ ತನ್ನ ಅಸ್ತಿತ್ವ ಹಾಗೂ ಸಮಾಜದಲ್ಲಿನ ಅನೇಕ ವಿಷಯಗಳ ಕುರಿತ ಅನಿಸಿಕೆಯನ್ನು ಗಟ್ಟಿಯಾಗಿ ದಾಖಲಿಸುತ್ತಾ ಬಂದಿರುವ ಮಹಿಳೆಯರು ಹಲವರು. ಇಂತಹ 170 ಕವಯಿತ್ರಿಯರ ಕವಿತೆಗಳು ಮತ್ತು ಅವರ ಬದುಕನ್ನು ಸಂಕ್ಷಿಪ್ತವಾಗಿ ಪರಿಚಯಿಸುವ ‘ನನ್ನ ಕವಿತೆ ನನ್ನ ಹಾಡು’ ಸಾಕ್ಷ್ಯಚಿತ್ರವನ್ನು ಕರ್ನಾಟಕ ಲೇಖಕಿಯರ ಸಂಘ ದಾಖಲಿಸಿದೆ.

ಹಿರಿಯ, ಮಧ್ಯಮ ಮತ್ತು ಕಿರಿಯ – ಹೀಗೆ ಮೂರೂ ತಲೆಮಾರಿನ ಕವಯಿತ್ರಿಯರನ್ನು ಸಾಕ್ಷ್ಯಚಿತ್ರ ಒಳಗೊಂಡಿದೆ. ಪ್ರತಿಯೊಬ್ಬ ಕವಯಿತ್ರಿಯರು ತಲಾ ಐದೈದು ಕವಿತೆಗಳನ್ನು ವಾಚಿಸಿದ್ದು, ಒಂದೊಂದು ಸಾಕ್ಷ್ಯಚಿತ್ರದ ಕಾಲಾವಧಿ ಹದಿನೈದು ನಿಮಿಷಗಳು. ಇತ್ತೀಚೆಗೆ ನಿಧನರಾದ ಡಿ. ವಿ. ಸುರೇಶ್‌ ಅವರ ನಿರ್ದೇಶನದಲ್ಲಿ ಸಾಕ್ಷ್ಯಚಿತ್ರಗಳು ಮೂಡಿಬಂದಿದ್ದು, ಸತ್ಯ ಭಾರದ್ವಾಜ್‌ ಸಂಕಲನ ಮಾಡಿದ್ದಾರೆ.

ಮೊಬೈಲ್‌ ಲೋಕದೊಳಗೆ ಕಳೆದುಹೋಗದೆ ಮುಖಕ್ಕೆ ಮುಖ ಕೊಟ್ಟು ಮಾತನಾಡುವ, ಕಷ್ಟಗಳಿಗೆ ಸ್ಪಂದಿಸುವ ಮನೋಧರ್ಮ ಬೆಳೆಸಿಕೊಳ್ಳುವ ಸಲಹೆ ನೀಡಿದೆ ಎಚ್‌. ಎನ್‌. ಆರತಿ ಅವರ ‘ಸೆಲ್ಫಿ’ ಕವಿತೆ. ಸಂಪ್ರದಾಯದ ಚೌಕಟ್ಟಿನೊಳಗೆ ಇಡಲಾಗಿರುವ ಹೆಣ್ಣಿಗೆ ಜ್ಞಾನವೆಂಬ ಕಿಡಿ ತಾಕಿದರೆ ಸಾಕು ಅವಳೂ ಸ್ಫೋಟಿಸಬಲ್ಲಳು ಎಂಬ ಆಶಯದ ಡಾ. ಸಬಿಹಾ ಭೂಮಿಗೌಡ ಅವರ ‘ಬೆಂಕಿಪೆಟ್ಟಿಗೆ’ ಸೇರಿದಂತೆ ಇತರೆ ಕವಿತೆಗಳು ಮಹಿಳಾ ಸಂವೇದನೆಯಿಂದ ಕೂಡಿವೆ.

ಕವಿತಾ ಕುಸುಗಲ್ಲ ಅವರ ‘ಬಂದು ಬಿಡು ಗೆಳೆಯ’ ರಚನೆಯ ಹಿಂದಿನ ಕಥೆ ಅತ್ಯಂತ ಸ್ವಾರಸ್ಯಕರವಾಗಿದೆ. ಮಕ್ಕಳಾದರೆ ದೇಹದ ಸೌಂದರ್ಯ ಕೆಡುತ್ತದೆ ಎಂದು ಹಲಬುವವರಿಗೆ ‘ತಾಯ್ತನ’ ಕವಿತೆ ಮೂಲಕ ‘ಮಕ್ಕಳಾದರೆ ದೇಹ ಸೌಂದರ್ಯ ಕೆಡುವುದಿಲ್ಲ. ಕಂದನಲ್ಲಿ ಕಾಣು ಸೃಷ್ಟಿಸೌಂದರ್ಯ’ ಎಂದು ಸಂದೇಶ ನೀಡಿದ್ದಾರೆ ಹೇಮಲತಾ ವಸ್ತ್ರದ.

ಮನೆ ಮುಂದೆ ಉದುರಿದ್ದ ಹೂಗಳು ರಂಗೋಲಿಯಾಗಿ ಕಂಡಾಗ ಅದನ್ನು ಗುಡಿಸಿ ಮತ್ತೆ ರಂಗೋಲಿ ಹಾಕುವ ಅಗತ್ಯವೇನು ಎಂದು ತಮ್ಮ ‘ರಂಗೋಲಿ ಗಿಡ’ ಕವಿತೆಯಲ್ಲಿ ಪ್ರಶಸ್ನಿಸಿದ್ದಾರೆ, ಜ್ಯೋತಿ ಗುರುಪ್ರಸಾದ್‌. ‘ನಾನೀಗ ಮನೆ ಮುಂದೆ ರಂಗೋಲಿ ಹಾಕುವುದನ್ನೇ ನಿಲ್ಲಿಸಿದ್ದೇನೆ. ಸೀಮೆಸುಣ್ಣ ರಂಗೋಲಿ ಪುಡಿಗಳಿಗೆ ಕೆಲಸವೇ ಇಲ್ಲ’ ಎಂದಿದ್ದಾರೆ ಅವರು.

ಮೀನಾಕ್ಷಿ ಬಾಳಿ ಅವರ ‘ಕನಸುಣಿಗಳು’ ವ್ಯವಸ್ಥೆಗೆ ಕನ್ನಡಿ ಹಿಡಿಯುವಂತಿದೆ. ಜನರ ನಡುವೆ ಕೆಲಸ ಮಾಡುವುದೇ ದೊಡ್ಡ ಕಾವ್ಯ ಎಂದು ಬರಹದಿಂದ ದೂರ ಉಳಿದಿದ್ದ ಕೆ. ನೀಲಾ ಅವರು ಮತ್ತೆ ಬರೆಯಲು ಆರಂಭಿಸಿದ ಬಗ್ಗೆ ಹೇಳಿಕೊಂಡಿದ್ದಾರೆ. ತೊಗರಿಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ನಡೆದ ಹೋರಾಟದ ಸಂದರ್ಭದಲ್ಲಿ ಹತ್ತು ದಿನ ಜೈಲಿನಲ್ಲಿದ್ದಾಗ ರಚಿಸಿದ ಕ್ಯೂಬಾ ವಿಮೋಚನಾ ಹೋರಾಟಗಾರ ‘ಚೆ’ ಕುರಿತಾದ ಕವಿತೆ ಮೈನವಿರೇಳಿಸುತ್ತದೆ.

ರಾಜ್ಯ ಸರ್ಕಾರದಿಂದ ಕೊಡಲಾಗುವ ಪ್ರಶಸ್ತಿಗಳನ್ನು ಆಯಾ ಸ್ಥಳದಲ್ಲಿ ನೀಡಿದರೆ ಅದಕ್ಕೆ ಹೆಚ್ಚು ಗೌರವ ಎನ್ನುವ ಲೀಲಾದೇವಿ ದೇವಿ ಆರ್‌. ಪ್ರಸಾದ್‌ ಅವರು ಕನ್ನಡ ಮತ್ತು ಸಂಸ್ಕೃತಿ ಸಚಿವೆಯಾಗಿದ್ದಾಗ ಅತ್ತಿಮಬ್ಬೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಲಕ್ಕುಂಡಿಯಲ್ಲಿಯೇ ಏರ್ಪಡಿಸಿದ್ದರಂತೆ. ಇದನ್ನು ಕವಿತೆಯಲ್ಲಿ ವಿವರಿಸಿದ್ದಾರೆ. ಎಲ್ಲವನ್ನೂ ಚೌಕಟ್ಟಿನೊಳಗೆ ನೋಡುವ ಮನುಷ್ಯ ಅವನು ಮುಕ್ತವಾಗಿ ಸಮಾಲೋಚಿಸಬೇಕು ಎನ್ನುವ ಗೀತಾ ವಸಂತ ಅವರ ‘ಆಕಾಶದ ನಗು’ ಗಮನಾರ್ಹವಾಗಿದೆ.

‘ಇಂದಿಗಿಂತ ನಾಳೆ ಚೆನ್ನಾಗಿರುತ್ತೆ. ನಾಳೆಗಿಂತ ನಾಡಿದ್ದು ಚೆನ್ನಾಗಿರುತ್ತೆ. ನನ್ನ ಬದುಕು ಸೊಗಸಾಗುತ್ತಾ ಹೋಗುತ್ತೆ’ ಎಂಬ ಭರವಸೆಯೇ ಕಾಯುವ ಹಿಂದಿನ ಬಹಳ ದೊಡ್ಡ ಶಕ್ತಿ ಎಂದು ಸುಧಾ ಶರ್ಮಾ ಚವತ್ತಿ ಅವರು ‘ಕಾಯುವ ಕವಿತೆಗಳು’ ಕವಿತೆಯಲ್ಲಿ ಹೇಳಿದ್ದಾರೆ. ಉದ್ಯೋಗ ಅರಸಿ ಹೊರರಾಜ್ಯಗಳಿಗೆ ಹೋಗುವ ಕನ್ನಡಿಗರ ಭಾವನೆಯನ್ನು ಹೈದರಾಬಾದ್‌ನ ಪ್ರವೀಣ ದೇಶಪಾಂಡೆ ಅವರು ‘ನಮ್ಮ ಭಾಗ್ಯದ ನಗರ’ ಮೂಲಕ ಕಟ್ಟಿಕೊಟ್ಟಿದ್ದಾರೆ. ಹೀಗೆ ನಾಡು, ಹೊರನಾಡಿನ 170 ಕವಯಿತ್ರಿಯರ ಕವಿತೆಗಳ ವಸ್ತುವಿಷಯ, ಸಂದರ್ಭ ಭಿನ್ನವಾದರೂ, ಅವರ ಧ್ವನಿ ಮಾತ್ರ ಮಹಿಳಾಪರ, ಪರಿಸರಪರ, ಸಮಾಜಮುಖಿಯಾಗಿದೆ.

**

ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ

ಮಹತ್ತರವಾದ ಯೋಜನೆಯಲ್ಲಿ ಕೆಲಸ ನಿರ್ವಹಿಸುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ. 2–3 ವರ್ಷಗಳ ಚಿತ್ರೀಕರಣದಲ್ಲಿ ವಿವಿಧ ತಲೆಮಾರುಗಳ ಕವಯಿತ್ರಿಯರನ್ನು ಕಾಣಲು, ಅವರ ತುಮುಲಗಳನ್ನು ಅರಿಯಲು ಸಾಧ್ಯವಾಯಿತು. ಕವಯಿತ್ರಿಯರ ಕಾವ್ಯ ವಾಚನದ ಜತೆಗೆ ಅವರ ವೈಯಕ್ತಿಕ ಹಾಗೂ ವೃತ್ತಿ ಜೀವನದ ಬಗ್ಗೆಯೂ ಸಾಕ್ಷ್ಯಚಿತ್ರ ಬೆಳಕು ಚೆಲ್ಲಿದೆ. ಪ್ರದೇಶವಾರು, ವಿಷಯವಾರು ಪ್ರತಿ ಸಾಕ್ಷ್ಯಚಿತ್ರಗಳು ಭಿನ್ನವಾಗಿ ಮೂಡಿಬಂದಿವೆ.

–ಸತ್ಯ ಭಾರದ್ವಾಜ್‌, ಸಂಕಲನಕಾರ

**

ನಾನು ಸಾಹಿತ್ಯ ಅಕಾಡೆಮಿ ಅಧ್ಯಕ್ಷನಾಗಿದ್ದಾಗ ಐದು ಪ್ರಮುಖ ಕವಿಗಳ ಕವಿತೆ ವಾಚಿಸುವ ಸಾಕ್ಷ್ಯಚಿತ್ರ ನಿರ್ಮಾಣ ಯೋಜನೆ ರೂಪಿಸಿದ್ದೆ. ಇದಕ್ಕೆ ಪ್ರಪಂಚದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಮುಂದೆ 153 ಕವಿಗಳ ಸಾಕ್ಷ್ಯಚಿತ್ರ ದಾಖಲಿಸಲು ಸಾಧ್ಯವಾಯಿತು. ಸಹೋದರಿ ವಸುಂಧರಾ ಭೂಪತಿ ಅವರು ಇದರಿಂದ ಪ್ರೇರಣೆಗೊಂಡು ಲೇಖಕಿಯರ ಸಂಘದಿಂದ 170 ಕವಯಿತ್ರಿಯರ ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿದ್ದಾರೆ. ಈ ಮೂಲಕ ಪ್ರಸಿದ್ಧರಲ್ಲದವರನ್ನೂ ಬೆಳೆಕಿಗೆ ತರಲು ಸಾಧ್ಯವಾಗಿರುವುದು ಶ್ಲಾಘನೀಯ. ಒಬ್ಬೊಬ್ಬ ಕವಿಯ ಧ್ವನಿ, ವಾಚನಾ ಶೈಲಿ ವಿಭಿನ್ನ. ಕವಿತೆ ಓದುವ ಬಗೆಯನ್ನು ಯುವಕರಿಗೆ ತಿಳಿಸಿಕೊಡಲು ಸಹಕಾರಿಯಾಗಿದೆ.

–ಎಂ.ಎಚ್‌. ಕೃಷ್ಣಯ್ಯ, ಮಾಜಿ ಅಧ್ಯಕ್ಷ, ಕರ್ನಾಟಕ ಸಾಹಿತ್ಯ ಅಕಾಡೆಮಿ.

**

ದೊಡ್ಡ ದಾಖಲೆ

ಪುರುಷರ ಅಬ್ಬರದ ನಡುವೆ ಮಹಿಳೆಯರನ್ನು ಗುರುತಿಸುವುದು ಅಪರೂಪ. ಪ್ರಭಾವಿಗಳು ಇಲ್ಲವೇ ಧೈರ್ಯ ಇರುವವರು ಮಾತ್ರವೇ ಬೆಳಕಿಗೆ ಬರುತ್ತಾರೆ. ಪ್ರತಿಭೆಯಿದ್ದರೂ ಮುನ್ನೆಲೆಗೆ ಬಾರದವರು ಹಲವರು. ಇಂತಹವರನ್ನೂ ಸಾಕ್ಷ್ಯಚಿತ್ರಕ್ಕೆ ಪರಿಗಣಿಸಿರುವುದು ಹೆಗ್ಗಳಿಕೆ. ಇದು ಬಹುದೊಡ್ಡ ದಾಖಲೆಯಾಗಿ ಉಳಿಯಲಿದೆ

–ಎಚ್‌. ಆರ್‌. ಸುಜಾತಾ, ಲೇಖಕಿ

**

ಐತಿಹಾಸಿಕ

ಇಷ್ಟು ದೊಡ್ಡ ಸಂಖ್ಯೆಯಲ್ಲಿ ಹೆಣ್ಣುಮಕ್ಕಳ ಧ್ವನಿ ದಾಖಲಿಸಿರುವುದು ಐತಿಹಾಸಿಕ. ನೂರು ವರ್ಷಗಳ ನಂತರ ತಿರುಗಿ ನೋಡಿದರೆ ಹೇಗೆ ಬರೆಯುತ್ತಿದ್ದರು ಎಂಬುದನ್ನು ಅರಿಯಲು, ಸಾಮಾಜಿಕ ಹಾಗೂ ಸಾಂಸ್ಕೃತಿಕವಾಗಿ ಅರ್ಥೈಸಿಕೊಳ್ಳಲು ಸಹಕಾರಿಯಾಗಲಿದೆ. ವಿವಿಧ ಪ್ರದೇಶಗಳ ಮಹಿಳೆಯರನ್ನು ಇಲ್ಲಿ ಕಾಣಬಹುದಾಗಿದ್ದು, ನಮ್ಮನ್ನು ನಾವು ಶೋಧಿಸಿಕೊಳ್ಳಲು ಸದಾವಕಾಶ.

–ಗೀತಾ ವಸಂತ, ಲೇಖಕಿ

**

ಅಂತರ್ಜಾಲದಲ್ಲಿ ಲಭ್ಯ

ಇಂದಿನ ಯುವ ಜನಾಂಗದವರಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿದೆ ಎಂಬ ಅಭಿಪ್ರಾಯ ಎಲ್ಲೆಡೆ ಕೇಳಿಬರುತ್ತಿದೆ. ಓದಿನ ಬದಲಿಗೆ ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ಗಳಲ್ಲಿ ತಲೆಮರೆಸಿಕೊಳ್ಳುತ್ತಿದ್ದಾರೆ. ಅಂತಹವರೂ ತಮಗಿಷ್ಟವಾದ ಕವಯಿತ್ರಿಯರ ಕವಿತೆಗಳನ್ನು ಅಂತರ್ಜಾಲದಲ್ಲಿ ಓದಲು ಅನುಕೂಲವಾಗಲಿದೆ.

–ತಮಿಳು ಸೆಲ್ವಿ, ಹೊರನಾಡ ಕನ್ನಡತಿ

**

ಲೇಖಕಿಯರ ಸಂಘದಿಂದ ಆಯೋಜಿಸುತ್ತಾ ಬಂದಿರುವ ಕಾರ್ಯಕ್ರಮಗಳಲ್ಲಿ ಇದು ಬೃಹತ್‌ ಯೋಜನೆ. ಕಳೆದ 2–3 ವರ್ಷಗಳ ಶ್ರಮದ ಫಲ ಈಗ ಸಾಕಾರಗೊಳ್ಳುತ್ತಿದೆ. ನಾಡಿನ ಮೂಲೆ ಮೂಲೆಗೂ ತೆರಳಿ ಕವಯಿತ್ರಿಯರ ಮನೆಗಳಲ್ಲಿಯೇ ಚಿತ್ರೀಕರಣ ನಡೆಸಿದ ನಿರ್ದೇಶಕ ಚಿಕ್ಕ ಸುರೇಶ್‌ ಅವರು ಎಡಿಟಿಂಗ್‌ ಹಂತದಲ್ಲಿ ನಮ್ಮನ್ನು ಅಗಲಿದರು. ಸತ್ಯ ಭಾರದ್ವಾಜ್‌ ಅವರು ಯೋಜನೆಯನ್ನು ಪೂರ್ಣಗೊಳಿಸಿದ್ದಾರೆ. ಇಂತಹುದೊಂದು ಪ್ರಯತ್ನ ದೇಶದಲ್ಲಿಯೇ ಪ್ರಥಮ. ಸಾಕ್ಷ್ಯಚಿತ್ರಗಳನ್ನು ಸಂಘದ ವೆಬ್‌ಸೈಟ್‌ಗೂ ಅಳವಡಿಸುವ ಗುರಿ ಇದೆ.

ಡಾ. ವಸುಂಧರಾ ಭೂಪತಿ, ಅಧ್ಯಕ್ಷೆ, ಕರ್ನಾಟಕ ಲೇಖಕಿಯರ ಸಂಘ

**

ಮಹತ್ತರವಾದ ಯೋಜನೆಯಲ್ಲಿ ಕೆಲಸ ನಿರ್ವಹಿಸುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ. 2–3 ವರ್ಷಗಳ ಚಿತ್ರೀಕರಣದಲ್ಲಿ ವಿವಿಧ ತಲೆಮಾರುಗಳ ಕವಯಿತ್ರಿಯರನ್ನು ಕಾಣಲು, ಅವರ ತುಮುಲಗಳನ್ನು ಅರಿಯಲು ಸಾಧ್ಯವಾಯಿತು. ಕವಯಿತ್ರಿಯರ ಕಾವ್ಯ ವಾಚನದ ಜೊತೆಗೆ ಅವರ ವೈಯಕ್ತಿಕ ಹಾಗೂ ವೃತ್ತಿಜೀವನದ ಬಗ್ಗೆಯೂ ಸಾಕ್ಷ್ಯಚಿತ್ರ ಬೆಳಕು ಚೆಲ್ಲಿದೆ. ಪ್ರದೇಶವಾರು, ವಿಷಯವಾರು ಪ್ರತಿ ಸಾಕ್ಷ್ಯಚಿತ್ರಗಳು ಭಿನ್ನವಾಗಿ ಮೂಡಿಬಂದಿವೆ.

–ಸತ್ಯ ಭಾರದ್ವಾಜ್‌, ಸಾಕ್ಷ್ಯಚಿತ್ರಗಳ ಸಂಕಲನಕಾರ

**

ನಾನು ಸಾಹಿತ್ಯ ಅಕಾಡೆಮಿ ಅಧ್ಯಕ್ಷನಾಗಿದ್ದಾಗ ಐದು ಪ್ರಮುಖ ಕವಿಗಳ ಕವಿತೆ ವಾಚಿಸುವ ಸಾಕ್ಷ್ಯಚಿತ್ರ ನಿರ್ಮಾಣ ಯೋಜನೆ ರೂಪಿಸಿದ್ದೆ. ಇದಕ್ಕೆ ಪ್ರಪಂಚದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಮುಂದೆ 153 ಕವಿಗಳ ಸಾಕ್ಷ್ಯಚಿತ್ರ ದಾಖಲಿಸಲು ಸಾಧ್ಯವಾಯಿತು. ಸಹೋದರಿ ವಸುಂಧರಾ ಭೂಪತಿ ಅವರು ಇದರಿಂದ ಪ್ರೇರಣೆಗೊಂಡು ಲೇಖಕಿಯರ ಸಂಘದಿಂದ 170 ಕವಯಿತ್ರಿಯರ ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿದ್ದಾರೆ. ಈ ಮೂಲಕ ಪ್ರಸಿದ್ಧರಲ್ಲದವರನ್ನೂ ಬೆಳೆಕಿಗೆ ತರಲು ಸಾಧ್ಯವಾಗಿರುವುದು ಶ್ಲಾಘನೀಯ. ಒಬ್ಬೊಬ್ಬ ಕವಿಯ ಧ್ವನಿ, ವಾಚನಾಶೈಲಿ ವಿಭಿನ್ನ. ಕವಿತೆ ಓದುವ ಬಗೆಯನ್ನು ಯುವಕರಿಗೆ ತಿಳಿಸಿಕೊಡಲು ಸಹಕಾರಿಯಾಗಿದೆ.

–ಎಂ.ಎಚ್‌. ಕೃಷ್ಣಯ್ಯ, ಮಾಜಿ ಅಧ್ಯಕ್ಷ, ಕರ್ನಾಟಕ ಸಾಹಿತ್ಯ ಅಕಾಡೆಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT