ಮೈಸೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆಯನ್ನು ನಿಷೇಧಿಸಿರುವ ಜಾರ್ಖಂಡ್ ಸರ್ಕಾರದ ಕ್ರಮವನ್ನು ಖಂಡಿಸಿ ಮಿಲಾದ್ಬಾಗ್ ಎದುರು ಶುಕ್ರವಾರ ಪ್ರತಿಭಟನೆ ನಡೆಯಿತು.
ಜಾರ್ಖಂಡ್ ಸರ್ಕಾರದ ತೀರ್ಮಾನ ಪೂರ್ವಗ್ರಹ ಪೀಡಿತವಾಗಿದೆ. ಐಎಸ್ಐ ಜೊತೆ ನಂಟು ಹೊಂದಿದೆ ಎಂಬುದು ಶುದ್ಧ ಸುಳ್ಳು. ರಾಜಕೀಯ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಂಘಪರಿವಾರದ ರಾಜಕೀಯ ಹಗೆತನದ ಬಹಿರಂಗ ಪ್ರದರ್ಶನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರಿ ಅಧಿಕಾರಿಗಳು ಪಕ್ಷಪಾತ ಮಾಡುತ್ತಿದ್ದಾರೆ. ಇಂತಹ ಹಲವು ಪ್ರಸಂಗಗಳನ್ನು ಸಂಘಟನೆಯು ಎದುರಿಸುತ್ತಾ ಬಂದಿದೆ. ಮುಸ್ಲಿಮರನ್ನು ಥಳಿಸಿ ಹತ್ಯೆಗೈಯ್ಯುವ ಪ್ರಕರಣಗಳು ಘಟಿಸುತ್ತಿವೆ. ಈ ಕಾರಣಕ್ಕಾಗಿ ಜಾರ್ಖಂಡ್ ಕುಖ್ಯಾತಿಯನ್ನೂ ಪಡೆದಿದೆ. ಇದನ್ನು ಪ್ರತಿಭಟಿಸಿದ ಕಾರಣಕ್ಕೆ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಬೇಕಾಗಿದೆ ಎಂದು ಆರೋಪಿಸಿದರು.
ಧಮನಿತರ ಹೋರಾಟವನ್ನು ನಿಗ್ರಹಿಸಲು ಕರಾಳ ಕಾನೂನುಗಳನ್ನು ಬಳಸುತ್ತಾ ಬರುತ್ತಿದೆ. ಇದು ಸಂವಿಧಾನಾತ್ಮಕ ಹಕ್ಕುಗಳ ಸ್ಪಷ್ಟ ಉಲ್ಲಂಘಣೆಯೂ ಆಗಿದೆ. ಬಿಜೆಪಿ ನಾಯಕರ ಪ್ರಚೋದನಾಕಾರಿ ಭಾಷಣದ ವಿರುದ್ಧ ಪ್ರತಿಭಟನೆ ನಡೆಸಿದ ಪಿಎಫ್ಐ ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ದೂರಿದರು.
ಜಿಲ್ಲಾ ಘಟಕದ ಅಧ್ಯಕ್ಷ ಅಮೀನ್ ಸೇಠ್, ಉರಿಲಿಂಗ ಪೆದ್ದಿ ಮಠ ಸ್ವಾಮೀಜಿ, ಎಸ್ಡಿಪಿಐ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್, ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಇದ್ದರು.