ಕಾರವಾರ: ಸೀಬರ್ಡ್ ನಿರಾಶ್ರಿತರಿಗೆ ನೀಡಬೇಕಿರುವ ಒಟ್ಟು ₹587 ಕೋಟಿ ಪರಿಹಾರದ ಪೈಕಿ ₹534 ಕೋಟಿ ಈಗಾಗಲೇ ಬಿಡುಗಡೆಯಾಗಿದೆ. ಉಳಿದ ₹53 ಕೋಟಿಯನ್ನು ಫೆ.27ರೊಳಗೆ ಜಿಲ್ಲಾಡಳಿತದ ಖಜಾನೆಗೆ ಜಮೆ ಮಾಡಲಾಗುವುದು ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಇಲ್ಲಿನ ಜಿಲ್ಲಾ ರಂಗಮಂದಿರಲ್ಲಿ ಶನಿವಾರ ಸೀಬರ್ಡ್ ಯೋಜನೆಯ ಸಂತ್ರಸ್ತರಿಗೆ ಪರಿಹಾರದ ಚೆಕ್ ವಿತರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ಕೇವಲ ₹78 ಕೋಟಿ ಜಮೆಯಾಗಿತ್ತು. 2014ರಿಂದ ಈವರೆಗೆ ಕೇಂದ್ರ ಸರ್ಕಾರ ₹459 ಕೋಟಿ ನೀಡಿದೆ ಎಂದು ಹೇಳಿದರು.
ಇದೇವೇಳೆ, 96 ಮಂದಿ ಸಂತ್ರಸ್ತರಿಗೆ ಪರಿಹಾರದ ಚೆಕ್ಗಳನ್ನು ಸಚಿವರು ಸಾಂಕೇತಿಕವಾಗಿ ಹಸ್ತಾಂತರಿಸಿದರು. ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರೂ ಉಪಸ್ಥಿತರಿದ್ದರು.