ಅಥಣಿ: ಬಸವಣ್ಣನವರು ‘ನುಡಿದಂತೆ ನಡೆ’ ಎಂದಿದ್ದರು. ವಚನದಂತೆ ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರ್ಕಾರ ನಡೆದುಕೊಂಡಿದೆ. ನಾವು ಅದೇ ರೀತಿ ನಡೆದಿದ್ದೇವೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಬಸವಣ್ಣನವರ ವಚನ ಉಲ್ಲೇಖಿಸಿ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯ ವೈಖರಿ ವಿಶ್ಲೇಷಣೆ ಮಾಡಿದರು.
ಶನಿವಾರ ಕಾಂಗ್ರೆಸ್ ಜನಾಶೀರ್ವಾದ ಯಾತ್ರೆ ಸಮಾವೇಶದಲ್ಲಿ ಭಾಷಣ ಮಾಡಿದ ಅವರು, ಮೋದಿಯವರು ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತೇನೆ, 15 ಲಕ್ಷ ಪ್ರತಿಯೊಬ್ಬರಿಗೆ ಕೊಡುತ್ತೇನೆ ಎಂದಿದ್ದರು. ಆದರೆ, ಕೊಡಲಿಲ್ಲ ಎಂದು ದೂರಿದರು.
ಬಸವಣ್ಣನವರ ವಚನ ಬಳಸುವ ಮೋದಿ, ನುಡಿದಂತೆ ನಡೆದಿಲ್ಲ. ನೀವು ಕೇವಲ ವೋಟಿಗಾಗಿ ಬಸವಣ್ಣನವರ ಹೆಸರು ಹೇಳುತ್ತಿದ್ದೀರಾ ಎಂದು ರಾಹುಲ್ ಪ್ರಶ್ನಿಸಿದರು.
ನಾವು ಕರ್ನಾಟಕದಲ್ಲಿ ಬಸವಣ್ಣನವರ ತತ್ವದಡಿ ಸರ್ವರ ಅಭಿವೃದ್ಧಿ ಮಾಡಿದ್ದೇವೆ.
ಎಂಬ ವಚನವನ್ನು ಮೋದಿ ಪಾಲಿಸುತ್ತಿಲ್ಲ. ಬಸವಣ್ಣನವರು ಕಾಯಕವೇ ಕೈಲಾಸ, ಸುಳ್ಳು ಹೇಳಬೇಡಿ ಎಂದು ವಚನದಲ್ಲಿ ಜನರಿಗೆ ಹೇಳಿದ್ದಾರೆ. ಆದರೆ ಮೋದಿ ಜನರಿಗೆ ಸುಳ್ಳು ಹೇಳುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ ಎಂದು ರಾಹುಲ್ ದೂರಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಮೋದಿ ರೈತರ, ಬಡವರ, ದಲಿತರ, ಅಭಿವೃದ್ಧಿ ಮಾಡಿ, ದೇಶದ ಎರಡು ಕೋಟಿ ಯುವಕರಿಗೆ ಉದ್ಯೋಗ ಸೃಷ್ಟಿಸಿ ಉದ್ಯೋಗ ನೀಡಿ, ಭಾರತೀಯರ ಖಾತೆಗೆ ಹದಿನೈದು ಲಕ್ಷ ಹಣ ಜಮಾ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ನಾಲ್ಕು ವರ್ಷದಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದರು.
ಬಸವ ಜನ್ಮಭೂಮಿ ಭೇಟಿ ಖುಷಿ ನೀಡಿದೆ
ತಿಕೋಟಾದಲ್ಲಿ ಭಾಷಣ ಮಾಡಿದ ರಾಹುಲ್ ಗಾಂಧಿ, ಬಸವ ಜನ್ಮಭೂಮಿ ಭೇಟಿ ಖುಷಿ ನೀಡಿದೆ. ಅಪಾರ ಮಹಿಳೆಯರು ನೆರೆದಿರುವುದು ಸಂತಸ. ಅಕ್ಕಮಹಾದೇವಿ ಕನ್ನಡ ನಾಡಿನ ಧೀಮಂತ ಮಹಿಳೆ. ಮಹಿಳೆಯರ ಹಕ್ಕಿಗಾಗಿ 12ನೇ ಶತಮಾನದಲ್ಲಿ ಹೋರಾಟ ಮಾಡಿದ್ದಾರೆ ಎಂದರು.
ರಾಣಿ ಚೆನ್ನಮ್ಮ ಸ್ಮರಣೆ ಮಾಡಿದ ಅವರು, ಇವರು ರಾಷ್ಟ್ರೀಯ ಮಾರ್ಗದರ್ಶಕರು. ಕಾಯಕವೇ ಕೈಲಾಸ ಎಂದರು. ನಾವೆಲ್ಲ ಒಂದೇ ಎಲ್ಲರಲ್ಲೂ ದೇವರಿದ್ದಾನೆ. ಬಸವಣ್ಣನವರ ಆಶಯವೇ ಕಾಂಗ್ರೆಸ್ ಧ್ಯೇಯ. ಮಹಿಳಾ ಸಬಲೀಕರಣ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಮಹಿಳಾ ರಕ್ಷಣೆಯಲ್ಲಿ ಕರ್ನಾಟಕ ಮುಂದಿದೆ ಎಂದರು.