ಇಸ್ಲಾಮಾಬಾದ್: ಗಡಿ ನಿಯಂತ್ರಣ ರೇಖೆ (ಎಲ್ಓಸಿ) ಬಳಿ ಭಾರತ ಸೇನೆ ಗುಂಡಿನ ದಾಳಿ ನಡೆಸಿದೆ ಎಂದು ಭಾರತದ ಉಪ ಹೈಕಮಿಷನರ್ ಜೆ.ಪಿ. ಸಿಂಗ್ ಅವರಿಗೆ ಪಾಕಿಸ್ತಾನ ಭಾನುವಾರ ಸಮನ್ಸ್ ನೀಡಿದೆ. ಇದು ಈ ತಿಂಗಳಲ್ಲಿ ನೀಡಿದ ಐದನೇ ಸಮನ್ಸ್ ಆಗಿದೆ.
‘ಇದೇ 23ರಂದು ನಿಕಿಯಾಲ್ ವಲಯದಲ್ಲಿ ಭಾರತದ ಸೇನೆ ಅಪ್ರಚೋದಿತವಾಗಿ ಕದನವಿರಾಮ ಉಲ್ಲಂಘಿಸಿದ್ದರಿಂದ ಸಾರ್ಕ್ನ ಪ್ರಧಾನ ನಿರ್ದೇಶಕ ಮೊಹಮ್ಮದ್ ಫೈಸಲ್ ಅವರು ಸಮನ್ಸ್ ನೀಡಿದ್ದಾರೆ’ ಎಂದು ಪಾಕಿಸ್ತಾನ ವಿದೇಶಾಂಗ ಸಚಿವಾಲಯ ತಿಳಿಸಿದೆ.
‘ದಾಳಿಯಲ್ಲಿ ಒಬ್ಬ ನಾಗರಿಕ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ. ಭಾರತದ ಈ ನಡೆಯಿಂದಾಗಿ ಪ್ರಾದೇಶಿಕ ಶಾಂತಿ ಮತ್ತು ಸುರಕ್ಷೆಗೆ ದುಷ್ಪರಿಣಾಮ ಉಂಟಾಗುತ್ತದೆ’ ಎಂದು ಫೈಸಲ್ ಅವರು ಹೇಳಿದ್ದಾರೆ.
ಸ್ಥಳಾಂತರ: ಗಡಿ ನಿಯಂತ್ರಣ ರೇಖೆ ಬಳಿ ಭಾರತ ಇತ್ತೀಚೆಗೆ ಅಪ್ರಚೋದಿತ ದಾಳಿ ನಡೆಸಿದ್ದರಿಂದ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಸರ್ಕಾರವು ಸ್ಥಳೀಯರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸುತ್ತಿದೆ’ ಎಂದು ಎಕ್ಸ್ಪ್ರೆಸ್ ಟ್ರಿಬ್ಯೂನ್ ಭಾನುವಾರ ವರದಿ ಮಾಡಿದೆ.