ಮಂಗಳೂರು: ಭಟ್ಕಳದಲ್ಲಿ ಶ್ರೀನಿವಾಸ ಡಿಲಕ್ಸ್ ಎಂಬ ಹೋಟೆಲ್ ನಡೆಸುತ್ತ ಮಕ್ಕಳಿಗೆ ಕೇವಲ 5 ರೂಪಾಯಿಗೆ ಮಧ್ಯಾಹ್ನದ ಬಿಸಿಯೂಟ ನೀಡುತ್ತಿದ್ದ ಮಾಧವ ಭಟ್ (61) ಅಸೌಖ್ಯದಿಂದ ಮಂಗಳವಾರ ಇಲ್ಲಿನ ಯೇನೆಪೋಯ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ಪತ್ನಿ, ಪುತ್ರ ಇದ್ದಾರೆ.
25 ವರ್ಷಗಳ ಹಿಂದೆಯೇ ಅವರು ಮಕ್ಕಳಿಗೆ ಅಗ್ಗದ ದರದಲ್ಲಿ ಊಟ ನೀಡುವ ಕಾಯಕಕ್ಕೆ ಕೈಹಚ್ಚಿದ್ದರು. ಆಗಿನ್ನೂ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆ ಆರಂಭವಾಗಿರಲಿಲ್ಲ. ಅದೆಷ್ಟೋ ಮಕ್ಕಳು ಮಧ್ಯಾಹ್ನದ ಹಸಿವಿನಿಂದ ಬಳಲುತ್ತಿದ್ದುದನ್ನು ಕಂಡ ಅವರು ಕೇವಲ 5 ರೂಪಾಯಿಗೆ ಊಟ ನೀಡುವ ಯೋಜನೆ ರೂಪಿಸಿದ್ದರು.
ಒಂದು ಕಾಲಕ್ಕೆ ಮಧ್ಯಾಹ್ನ 1 ಸಾವಿರ ಮಂದಿ ಹೋಟೆಲ್ನಲ್ಲಿ ಊಟ ಮಾಡಿ ಹೋಗುತ್ತಿದ್ದರು. ಬಿಸಿಯೂಟ ಯೊಜನೆ ಆರಂಭವಾದ ಬಳಿಕ ಮಕ್ಕಳ ಸಂಖ್ಯೆ ಇಳಿಯತ್ತ ಬಂದು 200ಕ್ಕೆ ತಲುಪಿತ್ತು.
3 ವರ್ಷಗಳ ಹಿಂದೆ ತಮ್ಮ ಹೋಟೆಲ್ ಬೇರೆಯವರಿಗೆ ಮಾರಿದ್ದ ಅವರು, ಮಂಗಳೂರಿಗೆ ಬಂದು ನೆಲೆಸಿದ್ದರು.