ಬೆಂಗಳೂರು: ‘ಹೊಸ ಹೊಸ ಸವಾಲುಗಳನ್ನು ಸ್ವೀಕರಿಸುವಂತೆ ಪೋಷಕರು ಮಕ್ಕಳಿಗೆ ಉತ್ತೇಜಿಸಬೇಕು’ ಎಂದು ಲೇಖಕ ರಾಮಗೋಪಾಲ್ ವಲ್ಲತ್ ಕಿವಿಮಾತು ಹೇಳಿದರು.
ಕೆ.ಆರ್.ಪುರ ಸಮೀಪದ ಕೇಂಬ್ರಿಡ್ಜ್ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸಾಧಿಸಲಾಗದಿದ್ದರೆ ಜನ ಆಡಿಕೊಳ್ಳುತ್ತಾರೆ ಎನ್ನುವ ಭಾವನೆ ಮಕ್ಕಳಲ್ಲಿ ಮೂಡದ ರೀತಿಯಲ್ಲಿ ಅವರನ್ನು ಬೆಳಸಬೇಕು. ಸೋಲು–ಗೆಲುವುಗಳನ್ನು ಸಮಾನ ರೀತಿಯಲ್ಲಿ ಸ್ವೀಕರಿಸುವ ಮನೋಭಾವ ಮಕ್ಕಳಲ್ಲಿ ಹೆಚ್ಚಾಗಬೇಕು’ ಎಂದು ಹೇಳಿದರು.
‘ಪರಸ್ಪರರನ್ನು ಗೌರವಿಸುವ ಉತ್ತಮ ನಡೆಯನ್ನು ಚಿಕ್ಕವರಿಂದಲೇ ಹೇಳಿಕೊಡಬೇಕು. ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳಿಸುವುದಷ್ಟೇ ಬದುಕಿನ ಗುರಿ ಎಂಬ ಭಾವನೆ ಮಕ್ಕಳಲ್ಲಿ ಬೆಳೆಯುವುದಕ್ಕೆ ಬಿಡಬೇಡಿ. ಕಲಿಕೆ ಬದುಕಿನ ಒಂದು ಭಾಗ ಎನ್ನುವ ವಿಷಯಗಳನ್ನು ಆಗಾಗ ಮನನ ಮಾಡಿಸುತ್ತಿರಿ’ ಎಂದು ಸಲಹೆ ನೀಡಿದರು.
‘ಮಕ್ಕಳ ಸಮಗ್ರ ಏಳಿಗೆಯೇ ನಮ್ಮ ಶಾಲೆಯ ಗುರಿ ಅದಕ್ಕಾಗಿಯೇ ನಾವು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ’ ಎಂದು ಶಾಲೆಯ ಸಂಸ್ಥಾಪಕ ಡಿ.ಕೆ. ಮೋಹನ ತಿಳಿಸಿದರು.