ಚೆನ್ನೈ: ಮದ್ರಾಸ್ ಐಐಟಿಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಸಂಸ್ಕೃತ ಪ್ರಾರ್ಥನಾ ಗೀತೆ ಹೇಳಿದ್ದು ಚರ್ಚೆಗೆ ಕಾರಣವಾಗಿದೆ.
ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ರಾಜ್ಯ ಸಚಿವ ಪೊನ್ ರಾಧಾಕೃಷ್ಣನ್ ಭಾಗವಹಿಸಿದ್ದ ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿಗಳು ‘ಮಹಾ ಗಣಪತಿಂ ಮನಸಾ ಸ್ಮರಾಮಿ..’ ಎಂಬ ಸಂಸ್ಕೃತ ಪ್ರಾರ್ಥನೆ ಗೀತೆ ಹಾಡಿದ್ದನ್ನು ಹಲವರು ಖಂಡಿಸಿದರು.
ತಮಿಳುನಾಡಿನಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಮೊದಲು ‘ತಮಿಳು ತಾಯೇ ವಝ್ತು’ ಎಂಬ ಗೀತೆಯನ್ನು ಹಾಡಲಾಗುತ್ತದೆ. ಕಾರ್ಯಕ್ರಮದ ಕೊನೆಯಲ್ಲಿ ರಾಷ್ಟ್ರಗೀತೆಯನ್ನು ಹಾಡುವುದು ಪದ್ಧತಿ. ಆದರೆ ಐಐಟಿಮೊದಲು ಸಂಸ್ಕೃತ ಗೀತೆಯನ್ನು ಹಾಡಿರುವುದಕ್ಕೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ.
ಐಐಟಿ ನಿರ್ದೇಶಕರಾದ ಎಂ. ಭಾಸ್ಕರ್ ರಾಮಮೂರ್ತಿ ಅವರೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ‘ವಿದ್ಯಾರ್ಥಿಗಳಿಗೆ ಇಂಥದೇ ಪ್ರಾರ್ಥನೆ ಗೀತೆ ಹಾಡಬೇಕು ಎಂದು ನಾವು ಯಾವುದೇ ನಿರ್ದೇಶನ ನೀಡಿಲ್ಲ. ವಿದ್ಯಾರ್ಥಿಗಳೇ ಈ ಹಾಡನ್ನು ಆಯ್ಕೆ ಮಾಡಿಕೊಂಡಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.