ಬಾರಾಬಂಕಿ (ಉತ್ತರ ಪ್ರದೇಶ): ‘ರಾಮ ಲಲ್ಲಾ’ ಮೂರ್ತಿ ಇರುವ ಸ್ಥಳದಲ್ಲಿಯೇ ಅಯೋಧ್ಯೆಯ ರಾಮಮಂದಿರ ನಿರ್ಮಾಣ ಆಗಲಿದೆ ಎಂದು ಬಿಜೆಪಿಯ ರಾಜ್ಯಸಭಾ ಸದಸ್ಯ ವಿನಯ ಕಟಿಯಾರ್ ಹೇಳಿದ್ದಾರೆ.
‘ಅಯೋಧ್ಯೆ ವಿವಾದದ ಬಗ್ಗೆ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದೆ. ಹಾಗಾಗಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲು ಎಷ್ಟು ಸಮಯ ಬೇಕಾಗಬಹುದು ಎಂದು ಹೇಳುವುದಕ್ಕೆ ಸಾಧ್ಯ ಇಲ್ಲ’ ಎಂದು ಕಟಿಯಾರ್ ತಿಳಿಸಿದ್ದಾರೆ.
‘ರಾಮ ಲಲ್ಲಾ ಮೂರ್ತಿ ಈಗ ಇರುವ ಸ್ಥಳ ಶ್ರೀರಾಮನಿಗೆ ಸೇರಿದ್ದು. ಆ ಮೂರ್ತಿ ಮುಂದೆಯೂ ಅಲ್ಲಿಯೇ ಇರಲಿದೆ. ನಾವು ನ್ಯಾಯಾಲಯದ ತೀರ್ಮಾನವನ್ನು ಎದುರು ನೋಡುತ್ತಿದ್ದೇವೆ’ ಎಂದು ಅವರು ಹೇಳಿದ್ದಾರೆ.
ದೇಶ ಮತ್ತು ಉತ್ತರ ಪ್ರದೇಶದ ಅಭಿವೃದ್ಧಿಗಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಜತೆಯಾಗಿ ಬದ್ಧತೆಯಿಂದ ಕೆಲಸ ಮಾಡುತ್ತಿದ್ದಾರೆ. ಅಪರಾಧಿಗಳು ಸ್ವಯಂಪ್ರೇರಿತರಾಗಿ ಪೊಲೀಸರ ಮುಂದೆ ಶರಣಾಗುತ್ತಿದ್ದಾರೆ ಎಂದು ಅವರು ಹೇಳಿದರು.