ನವದೆಹಲಿ: ಬಾಲಿವುಡ್ನ ಮೋಹಕ ನಟಿ ಶ್ರೀದೇವಿ ಅವರ ಸಾವು ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿರುವ ಬೆನ್ನಲೇ ಶ್ರೀದೇವಿ ಅವರನ್ನು ಹತ್ಯೆ ಮಾಡಿರಬಹುದು ಎಂದು ಬಿಜೆಪಿ ಮುಖಂಡ ಹಾಗೂ ಹಿರಿಯ ವಕೀಲ ಸುಬ್ರಹ್ಮಣ್ಯ ಸ್ವಾಮಿ ಸಂಶಯ ವ್ಯಕ್ತಪಡಿಸಿದ್ದಾರೆ.
ವೈದ್ಯರು ಮಾಧ್ಯಮಗಳ ಮುಂದೆ ಬಂದು ಹೃದಯಾಘಾತದಿಂದ ಮೃತಪಟ್ಟರೆಂದು ಘೋಷಣೆ ಮಾಡಿದ್ದು ಯಾಕೆ? ಅಲ್ಲಿನ ಸಿಸಿಟಿವಿ ದೃಶ್ಯಾವಳಿಗಳು ಏನಾದವು ? ಎಂದು ಅವರು ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ ಪ್ರಶ್ನೆ ಮಾಡಿದ್ದಾರೆ.
ಶ್ರೀದೇವಿಗೆ ಮದ್ಯ ಸೇವಿಸುವ ಅಭ್ಯಾಸ ಇರಲಿಲ್ಲ ಎಂದಿರುವ ಅವರು, ದುಬೈ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿನ ಅಂಶಗಳ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಬಾತ್ ಟಬ್ನಲ್ಲಿ ಮುಳುಗಿ ಸಾಯುವುದು ಅಸಾಧ್ಯ. ಒಂದು ವೇಳೆ ಯಾರಾದರೂ ತಳ್ಳಿದರೆ ಅಥವಾ ಉಸಿರುಗಟ್ಟಿಸಿದರೆ ಮಾತ್ರ ಸಾಯಲು ಸಾಧ್ಯ ಎಂದಿದ್ದಾರೆ. ಸಿನಿಮಾ ತಾರೆಯರಿಗೂ ಭೂಗತ ಪಾತಕಿ ದಾವೂದ್ ಇಬ್ರಾಹಿಂಗೂ ಸಂಬಂಧಗಳಿದ್ದು ಈ ಕೋನದಲ್ಲಿ ಸ್ವಲ್ಪ ಗಮನಹರಿಸಬೇಕಿದೆ ಎಂದು ಹೇಳಿದ್ದಾರೆ.