ಮುಂಬೈ: ಬಹುಭಾಷಾ ನಟಿ ಶ್ರೀದೇವಿ ಅವರ ಪಾರ್ಥಿವ ಶರೀರ ಮಂಗಳವಾರ ತಡರಾತ್ರಿ ಮುಂಬೈ ವಿಮಾನ ನಿಲ್ದಾಣ ತಲುಪಲಿದೆ.
ಎರಡು ದಿನಗಳ ಹಿಂದೆ ದುಬೈ ಹೋಟೆಲ್ವೊಂದರಲ್ಲಿ ಮೃತಪಟ್ಟ ಶ್ರೀದೇವಿ ಅವರ ಸಾವಿನ ಬಗ್ಗೆ ತನಿಖೆ ಕೈಗೊಂಡ ದುಬೈ ಸರ್ಕಾರ ಅವರ ಸಾವು ಆಕಸ್ಮಿಕವಾದುದು ಎಂದು ಹೇಳಿದ್ದು, ಪ್ರಕರಣವನ್ನು ಮುಕ್ತಾಯಗೊಳಿಸಿ ಮೃತದೇಹವನ್ನು ಕುಟುಂಬಸ್ಥರಿಗೆ ನೀಡಿದೆ.
ಭಾರತಕ್ಕೆ ಕೊಂಡೊಯ್ಯಲು ಬೇಕಿದ್ದ ಅನುಮತಿ ಪತ್ರಗಳನ್ನು ನೀಡಿದ ದುಬೈ ಪೊಲೀಸರು ಜೆಟ್ ವಿಮಾನದ ಮೂಲಕ ಪಾರ್ಥಿವ ಶರೀರವನ್ನು ಮುಂಬೈಗೆ ಕಳುಹಿಸಿಕೊಟ್ಟಿದೆ.
ಶ್ರೀದೇವಿ ಪತಿ ಬೋನಿ ಕಪೂರ್ ಹಾಗೂ ಮಗ ಅರ್ಜುನ್ ಕಪೂರ್ ದುಃಖತಪ್ತರಾಗಿದ್ದಾರೆ. ಅಂತ್ಯಸಂಸ್ಕಾರಕ್ಕೆ ಬೇಕಾದ ಸಿದ್ಧತೆಗಳನ್ನು ಕುಟುಂಬ ಮಾಡಿಕೊಂಡಿದ್ದು, ಬುಧವಾರ ಮುಂಬೈನಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.
ಸಾವಿನ ಪ್ರಕರಣ ಸಂಬಂಧದ ಎಲ್ಲಾ ತನಿಖೆಗಳು ಸಂಪೂರ್ಣವಾಗಿ ಮುಕ್ತಾಯಗೊಂಡಿದೆ. ಶ್ರೀದೇವಿ ಅವರು ಆಕಸ್ಮಿಕವಾಗಿ ಸ್ನಾನದ ತೊಟ್ಟಿಯಲ್ಲಿ ಬಿದ್ದು ಮೃತಪಟ್ಟಿದ್ದಾರೆ ಎಂದು ತನಿಖೆಯಿಂದ ದೃಢಪಟ್ಟಿದೆ. ಆದ ಕಾರಣ ಮೃತದೇಹವನ್ನು ಸಂಬಂಧಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ದುಬೈ ವಕೀಲರು ತಿಳಿಸಿದ್ದಾರೆ.