ಹೂವಿನಹಡಗಲಿ (ಬಳ್ಳಾರಿ ಜಿಲ್ಲೆ): ನಿಯಮಬಾಹಿರವಾಗಿ ಕಾಮಗಾರಿ ನಡೆಸಿ, ಚೆಕ್ ಪಡೆದ ಆರೋಪದ ಮೇಲೆ ಹೂವಿನಹಡಗಲಿ ತಾಲ್ಲೂಕಿನ ನಂದಿಹಳ್ಳಿ ಗ್ರಾಮ ಪಂಚಾಯ್ತಿಯ ಏಳು ಮಂದಿಯ ಸದಸ್ಯತ್ವ ರದ್ದಾಗಿದೆ.
ಎಚ್.ಪಿ.ನಿಂಗಮ್ಮ, ಎಚ್.ಸಣ್ಣಹಾಲಪ್ಪ, ಟಿ.ಶ್ರೀನಿವಾಸ, ವಿ.ಬಿ.ಕೊಟ್ರಮ್ಮ, ಜ್ಞಾನೇಶ್ವರಿ, ತಿರುಕಪ್ಪ ಹಾಗೂ ದೂಪದ ರಾಜಪ್ಪ ಸದಸ್ಯತ್ವ ಕಳೆದುಕೊಂಡವರು.
ನೈರ್ಮಲ್ಯ, ಕುಡಿವ ನೀರು, ಇತರೆ ತುರ್ತು ಸಂದರ್ಭಗಳ ನಿರ್ವಹಣೆ ಹೆಸರಲ್ಲಿ ಸ್ವತಃ ಕಾಮಗಾರಿ ನಿರ್ವಹಿಸಿ, ವೈಯಕ್ತಿಕವಾಗಿ ಮತ್ತು ಸಂಬಂಧಿಗಳ ಹೆಸರಲ್ಲಿ ಚೆಕ್ ಮೂಲಕ ಹಣ ಪಡೆದಿರುವ ಆರೋಪ ಈ ಸದಸ್ಯರ ಮೇಲಿತ್ತು. ಈ ಕುರಿತು ಜಿಲ್ಲಾ ಪಂಚಾಯ್ತಿ ಮುಖ್ಯ ಲೆಕ್ಕಾಧಿಕಾರಿ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ನವೆಂಬರ್ 30ರಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ನ್ಯಾಯಾಲಯದಲ್ಲಿ ಏಳು ಸದಸ್ಯರು ವಿಚಾರಣೆ ಎದುರಿಸಿದ್ದರು.
‘ಆರೋಪ ಸಾಬೀತಾಗಿದ್ದರಿಂದ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ 1993ರ ಪ್ರಕರಣ 43 (ಎ) ಅಡಿಯಲ್ಲಿ ಏಳು ಮಂದಿಯ ಸದಸ್ಯತ್ವವನ್ನು ತಕ್ಷಣದಿಂದ ರದ್ದುಗೊಳಿಸಲಾಗಿದೆ’ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಉದ್ಯೋಗ ಖಾತರಿ ಯೋಜನೆಯಡಿ ಲಕ್ಷಾಂತರ ರೂಪಾಯಿ ದುರುಪಯೋಗಪಡಿಸಿಕೊಂಡ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇದೇ ಗ್ರಾಮ ಪಂಚಾಯ್ತಿಯ ಅಧ್ಯಕ್ಷ ಕಂಠಿ ವೀರೇಶ್ ಅವರ ಸದಸ್ಯತ್ವವನ್ನು ರದ್ದು ಮಾಡಿ ಮಂಗಳವಾರ ಆದೇಶ ಹೊರಡಿಸಲಾಗಿತ್ತು. ಅದರ ಬೆನ್ನಲ್ಲೇ ಮತ್ತೆ ಏಳು ಮಂದಿ ಸದಸ್ಯತ್ವ ಕಳೆದುಕೊಂಡಿದ್ದಾರೆ.