ಬಿಡದಿ (ರಾಮನಗರ): ಇಲ್ಲಿಗೆ ಸಮೀಪದ ವಂಡರ್ಲಾ ಅಮ್ಯೂಸ್ಮೆಂಟ್ ಪಾರ್ಕಿಗೆ ಬುಧವಾರ ಮಧ್ಯಾಹ್ನ ಚಿರತೆ ಹೊಕ್ಕಿದ್ದು, ಸತತ ನಾಲ್ಕು ಗಂಟೆ ಕಾರ್ಯಾಚರಣೆಯ ಬಳಿಕ ಅದನ್ನು ಸೆರೆ ಹಿಡಿಯಲಾಯಿತು. ಇದರಿಂದ ಪ್ರವಾಸಿಗರು ನಿಟ್ಟುಸಿರು ಬಿಟ್ಟರು.
ಅಮ್ಯೂಸ್ಮೆಂಟ್ ಪಾರ್ಕಿಗೆ ಹೊಂದಿಕೊಡಂತೆಯೇ ಅರಣ್ಯ ಪ್ರದೇಶ ಇದೆ. ಅಲ್ಲಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಬೆದರಿದ ಚಿರತೆಯು ಪಾರ್ಕಿನತ್ತ ನುಗ್ಗಿತು ಎಂದು ಶಂಕಿಸಲಾಗಿದೆ.
ಸ್ವಾಮಿ ಗೌಡ ಎಂಬ ಪ್ರವಾಸಿ ಕ್ಯಾಬ್ ಚಾಲಕ ಅದನ್ನು ಗುರುತಿಸಿ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದರು. ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಕೈಗೊಂಡರು. ಬನ್ನೇರುಘಟ್ಟ ವಿಭಾಗದ ಅರವಳಿಕೆ ತಜ್ಞ ಉಮಾಶಂಕರ್ ಚಿರತೆಗೆ ಅರವಳಿಕೆ ಮದ್ದು ನೀಡಿದರು. ಸಂಜೆ 5.45ರ ಸುಮಾರಿಗೆ ಅದನ್ನು ಸೆರೆ ಹಿಡಿದು ಬೋನಿಯಲ್ಲಿ ಇರಿಸಲಾಗಿತು.
‘ಮೂರು ವರ್ಷ ಪ್ರಾಯದ ಹೆಣ್ಣು ಚಿರತೆ ಇದಾಗಿದ್ದು, ಆರೋಗ್ಯದಿಂದ ಇದೆ. ರಾತ್ರಿ ಕಾಡಿಗೆ ಬಿಡಲಾಗುವುದು’ ಎಂದು ವಲಯ ಅರಣ್ಯಾಧಿಕಾರಿ ದಾಳೇಶ್ ತಿಳಿಸಿದರು.
ಘಟನೆ ಸಂದರ್ಭ ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಸೇರಿದ್ದರು. ಚಿರತೆ ಸುದ್ದಿ ಕೇಳಿ ಭೀತಿಗೊಂಡಿದ್ದು, ಅದು ಸೆರೆಯಾದ ಬಳಿಕ ನಿಟ್ಟುಸಿರು ಬಿಟ್ಟರು.