ಹುಬ್ಬಳ್ಳಿ: ‘ಪ್ರಧಾನಿ ಮೋದಿ ಅವರ ಪ್ರಕಾರ ಕಾಂಗ್ರೆಸಿನವರದು ಕಮಿಷನ್ ಸರ್ಕಾರ, ಬಿಜೆಪಿಯವರದು ಮಿಷನ್ ಸರ್ಕಾರವಾದರೆ, ಜೆಡಿಎಸ್ನದ್ದು ವಿಜನ್ ಸರ್ಕಾರ’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜೆಡಿಎಸ್ನವರದು ವಿಜನ್ ಸರ್ಕಾರ ಎಂಬುದನ್ನು ಈ ಬಾರಿ ಮೋದಿ, ರಾಹುಲ್ಗೆ ತೋರಿಸಿಕೊಡುತ್ತೇನೆ’ಎಂದರು.
‘ಕಾಂಗ್ರೆಸ್ ಮತ್ತು ಬಿಜೆಪಿಯವರು ಜೆಡಿಎಸ್ ಅನ್ನು ಈ ಬಾರಿಯ ಚುನಾವಣೆಯಲ್ಲಿ ಲಘುವಾಗಿ ಪರಿಗಣಿಸಿದ್ದಾರೆ. ಆದರೆ, ಜೆಡಿಎಸ್ ಅಚ್ಚರಿಯ ಫಲಿತಾಂಶ ನೀಡಲಿದೆ’ ಎಂದರು.
‘ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮಹದಾಯಿ ಸಮಸ್ಯೆ ಬಗೆಹರಿಸುವುದಾಗಿ ಅಮಿತ್ ಶಾ ಜನರನ್ನು ದಾರಿ ತಪ್ಪಿಸುವ ಹಾಗೂ ಮೂರ್ಖನದ ಹೇಳಿಕೆ ನೀಡಿದ್ದಾರೆ. ಉತ್ತರ ಕರ್ನಾಟಕದ ಜನತೆ ಶಾ ಹೇಳಿಕೆಯನ್ನು ಸೂಕ್ಷ್ಮವಾಗಿ ನೋಡಬೇಕು’ ಎಂದು ಸಲಹೆ ನೀಡಿದರು.
‘ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಜೆಡಿಎಸ್ ಗೆ ಕಾಂಗ್ರೆಸ್ ನ್ಯಾಯಯುತವಾಗಿ ಒಂದು ಸ್ಥಾನ ಬಿಟ್ಟುಕೊಡಬೇಕು. ನಾವು ಕೇಳಿತ್ತಿರುವುದು ಭಿಕ್ಷೆಯಲ್ಲ ಎಂದು ಹೇಳಿದರು. ರೈತರ ಸಾಲ ಮನ್ನಾಕ್ಕೆ ಒಪ್ಪಿಗೆ ನೀಡದಿದ್ದ ಬಿ.ಎಸ್.ಯಡಿಯೂರಪ್ಪ ಅದೇಗೆ ರೈತ ಬಂಧುವಾಗಲು ಸಾಧ್ಯ’ ಎಂದು ಪ್ರಶ್ನಿಸಿದರು.