ಸಂಡೂರು (ಬಳ್ಳಾರಿ ಜಿಲ್ಲೆ): ಉಡಾನ್ ಯೋಜನೆ ಅಡಿ ಇಲ್ಲಿನ ಜಿಂದಾಲ್ ವಿಮಾನ ನಿಲ್ದಾಣದಲ್ಲಿ ವಿದ್ಯಾನಗರ – ಬೆಂಗಳೂರು ವಿಮಾನ ಯಾನ ಸೇವೆಗೆ ವಿಮಾನಯಾನ ಸಚಿವಾಲಯದ ಜಂಟಿ ಕಾರ್ಯದರ್ಶಿ ಉಷಾ ಪದೀ ಗುರುವಾರ ಚಾಲನೆ ನೀಡಿದರು.
ಮಾರ್ಚ್ ತಿಂಗಳಲ್ಲಿ ಪ್ರಯಾಣ ದರ ₹1,033 ಇರಲಿದೆ. ಪ್ರತಿನಿತ್ಯ ಜಿಂದಾಲ್ ನಿಲ್ದಾಣದಿಂದ 2 ಗಂಟೆಗೆ ಹೊರಟು 3 ಗಂಟೆಗೆ ಬೆಂಗಳೂರು ತಲುಪಲಿದೆ. ಮಧ್ಯಾಹ್ನ 3.30ಕ್ಕೆ ಬೆಂಗಳೂರಿನಿಂದ ಹೊರಟು 4.30ಕ್ಕೆ ಜಿಂದಾಲ್ಗೆ ವಾಪಸಾಗಲಿದೆ. ಸರ್ಕಾರದ ಈ ಯೋಜನೆಗೆ ಜೆಎಸ್ಡಬ್ಲ್ಯು ಕಂಪನಿ ಕೈಜೋಡಿಸಿದೆ.
‘ಜಿಂದಾಲ್ ವಿಮಾನ ನಿಲ್ದಾಣದಲ್ಲಿ ರಾತ್ರಿ ವೇಳೆ ವಾಹನ ನಿಲುಗಡೆ, ಕ್ಯಾಂಟೀನ್ ಸೌಲಭ್ಯ, ಟರ್ಮ್ಯಾಕ್, ಹ್ಯಾಂಗರ್, ರಿವರ್ಸ್ ಆಸ್ಮಾಸಿಸ್ ಫಿಲ್ಟರ್ ಮುಂತಾದ ಸೌಲಭ್ಯಗಳನ್ನು ಕಲ್ಪಿಸಲಾಗಿದೆ’ ಎಂದು ಉಷಾ ತಿಳಿಸಿದರು. ಟ್ರೂಜೆಟ್ ವಿಮಾನ ಯಾನ ಸಂಸ್ಥೆ ಸಿಇಒ ವಿಶೋಕ್ ಮಾನ್ಸಿಂಗ್ ಇದ್ದರು.