ಹೊಸಪೇಟೆ/ ಬೆಳಗಾವಿ: ಕುಂದಾನಗರಿ ಬೆಳಗಾವಿ, ಬಳ್ಳಾರಿ, ಹೊಸಪೇಟೆ ಸೇರಿದಂತೆ ಉತ್ತರ ಕರ್ನಾಟಕದ ವಿವಿಧ ಭಾಗಗಳಲ್ಲಿ ಹೋಳಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಯುವಕ–ಯುವತಿಯರ ಉತ್ಸಾಹ ಚಿಮ್ಮಿ ಪರಸ್ಪರ ಸಹೋದರತೆ, ಭಾಂದವ್ಯ ಮತ್ತು ಭಾತೃತ್ವವನ್ನು ಬೆಳೆಸುವ ಬೇಸಿಗೆಯ ಚೈತ್ರ ಮಾಸದ ಹೋಳಿ ಹಬ್ಬವನ್ನು ಆಚರಿಸಲಾಯಿತು.
ಹೊಸಪೇಟೆ: ಹೋಳಿ ಹಬ್ಬದ ಅಂಗವಾಗಿ ನಗರದಲ್ಲಿ ಭವ್ಯ ಮೆರವಣಿಗೆ ನಡೆಯಿತು. ಲಂಬಾಣಿ ನೃತ್ಯ, ಡೊಳ್ಳು ಕುಣಿತ, ರಂಗಿನಾಟದಲ್ಲಿ ಜನತೆ ಸಂಭ್ರಮಿಸಿದರು. ಶಾಸಕ ಆನಂದ್ ಸಿಂಗ್ ಹಾಗೂ ಬಿಜೆಪಿ ಮುಖಂಡ ಎಚ್.ಆರ್.ಗವಿಯಪ್ಪ ಜನರೊಂದಿಗೆ ಹೋಳಿ ಆಚರಿಸಿ ಸಂಭ್ರಮಿಸಿದರು.
ಇಲ್ಲಿನ ಮುನ್ಸಿಪಲ್ ಮೈದಾನದಲ್ಲಿ ಹೋಳಿ ಹಬ್ಬದ ಅಂಗವಾಗಿ ಮೊಸರು ಗಡಿಗೆ ಒಡೆಯುವ ಸ್ಪರ್ಧೆ ಆಯೋಜಿಸಲಾಗಿತ್ತು.
ಬೆಳಗಾವಿ: ಕುಂದಾನಗರಿಯಲ್ಲೂ ಜಿಲ್ಲೆಯಾದ್ಯಂತ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ವ್ಯಾಕ್ಸಿನ್ ಡಿಪೊ ಸಮೀಪದ ಲೇಲೇ ಮೈದಾನದಲ್ಲಿ ಬಿಜೆಪಿ ಮುಖಂಡ ಅಭಯ ಪಾಟೀಲ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಪಾಲ್ಗೊಂಡು ಸಂಭ್ರಮಿಸಿದರು. ಪುರುಷರು ಹಾಗೂ ಮಕ್ಕಳು, ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು.
ರಸ್ತೆಗಳಲ್ಲೂ ಯುವಕ, ಯುವತಿಯರು ಪರಸ್ಪರ ಬಣ್ಣ ಎರಚಿಕೊಂಡು ಸಂಭ್ರಮಿಸಿದರು.