ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ‘ಲೆಕ್ಕಕೊಡಿ’ ಕನ್ನಡಿಗರಿಗೆ, ‘ಲೆಕ್ಕಕೊಡಿ’ ಬೆಂಗಳೂರಿನ ಜನರಿಗೆ ಎಂಬ ಅಭಿಯಾನ ನಡೆಸುತ್ತಿರುವ ಬಿಜೆಪಿ, ಈ ವಿಷಯಕ್ಕೆ ಸಂಬಂಧಿಸಿ ಬಿಡುಗಡೆ ಮಾಡಿರುವ ಆರೋಪ ಪಟ್ಟಿ ಪುಸ್ತಕದಲ್ಲಿ ತಪ್ಪು ಚಿತ್ರ ಪ್ರಕಟಿಸಿದೆ.
ಬೆಂಗಳೂರಿನಲ್ಲಿರುವ ರಸ್ತೆ ಗುಂಡಿಗಳ ಬಗ್ಗೆ ಆರೋಪಿಸಿ ಮಿಝೋರಾಂನ ರಸ್ತೆಯ ಚಿತ್ರ ಪ್ರಕಟಿಸಿದೆ. ಜೊತೆಗೆ, ಬೆಂಗಳೂರಿನ ಕಸದ ಸಮಸ್ಯೆ ಪ್ರಸ್ತಾಪಿಸಿ ನೇಪಾಳದ ರಾಜಧಾನಿ ಕಾಠ್ಮಂಡುವಿನ ಚಿತ್ರ ಪ್ರಕಟಿಸಿದೆ.
‘ಮೂಲಸೌಕರ್ಯಗಳನ್ನು ಮೂಲೆಗುಂಪು ಮಾಡಿದೆ ಕಾಂಗ್ರೆಸ್’ ಎಂದು ಪುಸ್ತಕದಲ್ಲಿ ಬಿಜೆಪಿ ಆರೋಪಿಸಿದೆ. ಅಲ್ಲದೆ, ‘ಕೆಂಪೇಗೌಡ ಲೇಔಟ್ನಿಂದ ಮೈಸೂರು ರಸ್ತೆವರೆಗೆ ಕೇವಲ 12 ಕಿಲೋಮೀಟರ್ ಉದ್ದದ ರಸ್ತೆ ಕಾಮಗಾರಿಗೆ ಬರೋಬ್ಬರಿ ₹ 468 ಕೋಟಿ ರೂಪಾಯಿ ವ್ಯಯಿಸಿದ ಭ್ರಷ್ಟ ಸರ್ಕಾರ’ ಎಂದು ಬಿಜೆಪಿ ಆರೋಪಿಸಿದೆ. ಈ ಆರೋಪದ ಪ್ರತಿಪಾದನೆಗೆ ಬಳಸಿರುವ ಚಿತ್ರ ಮಿಝೋರಾಂನ ರಸ್ತೆಯದ್ದಾಗಿದೆ. ಮನಿ ಕಂಟ್ರೋಲ್ ವೆಬ್ಸೈಟ್ನಲ್ಲಿ ಮಿಝೋರಾಂ ರಸ್ತೆಗೆ ಸಂಬಂಧಿಸಿದ ವರದಿಯಲ್ಲಿ ಬಳಸಿದ ಚಿತ್ರ ಇದಾಗಿದೆ.
ಬೆಂಗಳೂರಿನ ಮಾಲಿನ್ಯಕ್ಕೆ ಸಂಬಂಧಿಸಿ ನೇಪಾಳದ ರಾಜಧಾನಿ ಕಾಠ್ಮಂಡುವಿನ ಚಿತ್ರ ಬಳಸಿದೆ. ಬ್ಲಾಗ್ವೊಂದರಿಂದ ಈ ಚಿತ್ರವನ್ನು ಬಳಸಲಾಗಿದೆ. ಬಿಜೆಪಿ ಆರೋಪಪಟ್ಟಿ ಪುಸ್ತಕದಲ್ಲಿ ಈ ಚಿತ್ರ ಎನ್ಪಿಆರ್ ಸಂಗ್ರಹ ಚಿತ್ರ ಎಂದು ಪ್ರತಿಪಾದಿಸಲಾಗಿದೆ.