ಬೆಂಗಳೂರು: ದಲಿತ ಸಂಘರ್ಷ ಸಮಿತಿಗಳ ವತಿಯಿಂದ ‘ಎತ್ತ ಸಾಗುತ್ತಿದೆ ಭಾರತ?’ ಎಂಬ ರಾಷ್ಟ್ರಮಟ್ಟದ ವಿಚಾರ ಸಂಕಿರಣವನ್ನು ಇದೇ 10 ಹಾಗೂ 11 ರಂದು ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಶನಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ, ‘ವಿಚಾರವಾದಿ ಪ್ರೊ.ಕಂಚ ಐಲಯ್ಯ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ದೇವನೂರ ಮಹಾದೇವ, ನಟ ಪ್ರಕಾಶ್ ರೈ, ಮಾನವಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಹಾಗೂ ಪತ್ರಕರ್ತ ಅಬ್ದುಲ್ ಸಲಾಂ ಪುತ್ತಿಗೆ ಅವರು ಮೊದಲ ದಿನದ ವಿಚಾರ ಸಂಕಿರಣದಲ್ಲಿ ಮಾತನಾಡಲಿದ್ದಾರೆ’ ಎಂದು ಅವರು ಹೇಳಿದರು.
ಸಮ ಸಮಾಜ ನಿರ್ಮಾಣದ ಆಶಯಗಳು, ಸಮಕಾಲೀನ ಆತಂಕಗಳು, ಜಾತ್ಯತೀತತೆ, ಕೋಮು ಸೌಹಾರ್ದತೆ ಮತ್ತು ಬಹುಸಂಸ್ಕೃತಿ ಮೇಲಿನ ದಾಳಿಗಳ ಕುರಿತು ಚರ್ಚೆ ನಡೆಯಲಿದೆ. ದೇಶಿ ಧಾರ್ಮಿಕ ಪರಂಪರೆ, ಧರ್ಮ ಸಂಸತ್, ಕೋಮು ನಿಗ್ರಹ ಶಕ್ತಿ, ಜಾತ್ಯತೀತ ಶಕ್ತಿಗಳ ಧೃವೀಕರಣದ ಅನಿವಾರ್ಯತೆ, ಸಂವಿಧಾನದ ಆಶಯಗಳು ಮತ್ತು ಮಾಧ್ಯಮಗಳ ಹೊಣೆಗಾರಿಕೆ ಬಗ್ಗೆಯೂ ಚರ್ಚೆಯಾಗಲಿದೆ ಎಂದು ಮಾಹಿತಿ ನೀಡಿದರು.
11ರ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ ಹಾಗೂ ಎಚ್.ಆಂಜನೇಯ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.