ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆದ್ದಲುಗಳಿಂದ ಕೃಷಿ ಪಾಠ

Last Updated 4 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಗೆದ್ದಲು ಅಂದರೆ ಸಾಮಾನ್ಯವಾಗಿ ಎಲ್ಲರೂ ಪೀಠೋಪಕರಣ, ಬಾಗಿಲು ಕಿಟಕಿಗಳನ್ನು ಹಾಳುಗೆಡಹುವ ಕೀಟ ಎಂದುಕೊಂಡಿರಬಹುದು. ಆದರೆ, ಕೆಲವು ಬಗೆಯ ಗೆದ್ದಲುಗಳಿಗೆ ಸಿಗಬೇಕಾದ ಮೆಚ್ಚುಗೆ ಸಿಕ್ಕಿಲ್ಲ ಎಂಬುದೂ ಸತ್ಯ. ಏಕೆ ಗೊತ್ತೇ? ಅವು ಭೂಮಿಯ ಮೇಲಿನ ಮೊದಲ ‘ರೈತರು’ ಎಂಬುದು ಸಂಶೋಧನೆಯೊಂದರಿಂದ ಕಂಡುಬಂದಿದೆ.

ಕೆಲವು ಗೆದ್ದಲುಗಳು, ತಮ್ಮ ಆಹಾರವನ್ನು ತಾವೇ ಬೆಳೆಸುತ್ತವೆಯಂತೆ! ಅವುಗಳ ತೋಟಗಳು ನಮ್ಮ ತೋಟಗಳಂತೆ ಇರುವುದಿಲ್ಲ ನಿಜ. ಆದರೆ ಆಹಾರಕ್ಕಾಗಿ ತಮ್ಮ ಗೂಡುಗಳಲ್ಲಿ ವಿವಿಧ ಬಗೆಯ ಶಿಲೀಂಧ್ರಗಳನ್ನು ಬೆಳೆಯುತ್ತವೆ. ಪ್ರತಿಯಾಗಿ, ಆ ಶಿಲೀಂಧ್ರಗಳ ಬೆಳವಣಿಗೆಗೆ ಸಹಾಯವಾಗಲೆಂದೇ ಹಲವು ಪದಾರ್ಥಗಳನ್ನು ಪೂರೈಕೆ ಮಾಡುತ್ತಾ ಪರಸ್ಪರ ಸಂಬಂಧವನ್ನು ಸುಲಲಿತಾಗಿ ನಿರ್ವಹಿಸುತ್ತವೆ.

ಆದರೆ, ನಮ್ಮ ಕೃಷಿಯಂತೆಯೇ ಗೆದ್ದಲುಗಳಿಗೂ ಕೃಷಿಯಲ್ಲಿ ಕಳೆಗಳ ಕಾಟ ತಪ್ಪಿದ್ದಲ್ಲ. ಹಾಗಾದರೆ, ಗೆದ್ದಲುಗಳು ಈ ಕಳೆಗಳ ಸಮಸ್ಯೆಯಿಂದ ಹೇಗೆ ಮುಕ್ತಿ ಪಡೆಯುತ್ತವೆ? ನಮ್ಮಂತೆ ಕೀಟನಾಶಕಗಳ ಬಳಕೆ ಅಲ್ಲೂ ಇದೆಯೇ ಎಂದು ಹುಬ್ಬೇರಿಸುತ್ತೀರಾ? ಇಂತಹಾ ಸವಾಲುಗಳ ಬೆನ್ನಟ್ಟಿ ಹೊರಟವರು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಸಂಶೋಧಕರು ಮತ್ತು ಫ್ರಾನ್ಸ್ ದೇಶದ 'ಎಕೊಲೆ ನ್ಯಾಶನಲೆ ಸುಪಿರಿಯರೆ ಡಿ ಚಿಮೆ ಡೆ ಮಾಂಟ್ಪೆಲ್ಲಿಯರ್'ನ ಸಂಶೋಧಕರು.

'ಜರ್ನಲ್ ಆಫ್ ಕೆಮಿಕಲ್ ಇಕಾಲಜಿ' ಎಂಬ ನಿಯತಕಾಲಿಕೆಯಲ್ಲಿ ಇವರ ಹೊಸ ಸಂಶೋಧನಾ ಲೇಖನ ಪ್ರಕಟವಾಗಿದೆ. ಇದರ ಪ್ರಕಾರ, ಕೃಷಿಕ ಗೆದ್ದಲುಗಳು, ತಾವು ಆಹಾರವಾಗಿ ಬಳಕೆ ಮಾಡಲು ಸೂಕ್ತವಾದ ಶಿಲೀಂಧ್ರಗಳು ಮತ್ತು ಅನಗತ್ಯ ಕಳೆ/ ಅಪಾಯಕಾರಿ ಶಿಲೀಂಧ್ರಗಳ ನಡುವೆ ಸ್ಪಷ್ಟವಾಗಿ ವ್ಯತ್ಯಾಸ ಗುರುತಿಸಬಲ್ಲವು. ಇದು ಹೇಗೆ ಗೊತ್ತೇ? ಆ ಶಿಲೀಂಧ್ರಗಳ ವಾಸನೆಯನ್ನು ಆಘ್ರಾಣಿಸುವ ಮೂಲಕ!

ಈ ಸಂಶೋಧನೆಯ ಪ್ರಕಾರ, ಸಂಶೋಧಕರು 'ಓಡಾಂಟೊಟರ್ಮಸ್ ಒಬೆಸಸ್' ಎಂಬ ಗೆದ್ದಲು ಪ್ರಭೇದದ ಮೇಲೆ ಅಧ್ಯಯನ ನಡೆಸಿದರು. ಈ ಗೆದ್ದಲನ್ನು, ಎರಡು ರೀತಿಯ ಶಿಲೀಂಧ್ರಗಳನ್ನು ಹೊಂದಿರುವ ಜೀವಕೋಶ ಪೂರಕ ಕೃಷಿಕೆಯೊಳಗೆ ಪರಿಚಯಿಸಿದರು. ಅಂದರೆ, ಸೂಕ್ಷ್ಮಾಣುಜೀವಿಗಳನ್ನು ಬೆಳೆಸಲು ಬಳಸುವ ಅಗತ್ಯ ಪೋಷಕಾಂಶಗಳನ್ನು ಒದಗಿಸುವ ಮಾಧ್ಯಮದಲ್ಲಿ 'ಟರ್ಮಿಟೊಮೈಸಸ್' ಮತ್ತು 'ಸುಡೊಕ್ಸಿಲೈರಿಯಾ' ಎಂಬ ಎರಡು ಶಿಲೀಂಧ್ರಗಳನ್ನು ಬೆಳೆಸಿ, ಅಲ್ಲಿ ಈ ಗೆದ್ದಲನ್ನು ಇರಿಸಿದರು.

ಇಲ್ಲಿ ಬಳಸಲಾದ 'ಟರ್ಮಿಟೊಮೈಸಸ್' ಎಂಬ ಶಿಲೀಂಧ್ರವು ಕೃಷಿಕ ಗೆದ್ದಲುಗಳು ಸಾಮಾನ್ಯವಾಗಿ ಆಹಾರಕ್ಕೆ ಬೆಳೆಸುವ ಶಿಲೀಂಧ್ರವಾಗಿದ್ದು, 'ಸುಡೊಕ್ಸಿಲೈರಿಯಾ' ಎಂಬುದು ಕಳೆ ಶಿಲೀಂಧ್ರ. ಈ 'ಕೃಷಿಕೆ'ಯೊಳಗೆ ಬಂದ ತಕ್ಷಣ ಕಾರ್ಯಪ್ರವೃತ್ತರಾದ ಗೆದ್ದಲುಗಳು, 'ಕೃಷಿಕೆ'ಯೊಳಗೆ ಪೋಷಕಾಂಶ ನೀಡಲು ಬಳಸಲಾದ 'ಆಗಾರ್' ಮಾಧ್ಯಮವನ್ನು ಅಗೆಯಲು ಪ್ರಾರಂಭಿಸಿದವು. ಅದನ್ನು ಅಗೆದು ಮೊಗೆದು ಒಂದೆಡೆ ಪೇರಿಸಿ 'ಬೋಲಸ್' ಎಂದು ಕರೆಯಲ್ಪಡುವ ರಾಶಿ ಸೃಷ್ಟಿಸಿದವು.

ಭಾರತೀಯ ವಿಜ್ಞಾನ ಸಂಸ್ಥೆಯ ಪ್ರೊಫೆಸರ್ ರೆನೀ ಬೊರ್ಜಸ್ ಪ್ರಕಾರ, ಈ ಗೆದ್ದಲುಗಳು ಮಣ್ಣಿನ ಮಾಧ್ಯಮವನ್ನೂ ಇದೇ ರೀತಿ ಬಳಸುತ್ತವೆ ಮತ್ತು 'ಬೋಲಸ್' ರಾಶಿಯನ್ನು ತಮಗೆ ಬೇಡದ ಕಳೆ ಶಿಲೀಂಧ್ರಗಳ ಮೇಲೆ ಹೆಚ್ಚೆಚ್ಚು ಪೇರಿಸಿ, ಅವುಗಳನ್ನು ಹೂತುಹಾಕುತ್ತವೆ. ಇಲ್ಲೂ ಸಂಶೋಧಕರು ಗಮನಿಸಿದ್ದೇನೆಂದರೆ, ಗೆದ್ದಲುಗಳು ಕಳೆ ಶಿಲೀಂಧ್ರವಾದ 'ಸುಡೊಕ್ಸಿಲೈರಿಯಾ' ಮೇಲೆ ಹೆಚ್ಚೆಚ್ಚು 'ಅಗಾರ್'ನ ರಾಶಿ ಪೇರಿಸಿ ಹೂತು ಹಾಕುವ ಪ್ರಯತ್ನ ಮಾಡಿದವು ಮತ್ತು 'ಟರ್ಮಿಟೊಮೈಸಸ್' ಶಿಲೀಂಧ್ರದ ಮೇಲೆ ಕನಿಷ್ಠ ಪ್ರಮಾಣದ 'ಬೋಲಸ್' ಪೇರಿಸಿದವು.

ಈ ನಿಟ್ಟಿನಲ್ಲಿ ಹೆಚ್ಚಿನ ತಿಳುವಳಿಕೆ ಪಡೆಯುವ ಸಲುವಾಗಿ, ಸಂಶೋಧಕರು ಈ ಕೃಷಿಕ ಗೆದ್ದಲುಗಳಿಗೆ ಹೆಚ್ಚಿನ ಸವಾಲನ್ನು ಒಡ್ಡಿದರು. ಪೂರ್ತಿ ಕತ್ತಲೆಯ ಪರಿಸರದಲ್ಲಿ ಶಿಲೀಂಧ್ರಗಳೆರಡಕ್ಕೂ ಭೌತಿಕ ಪ್ರವೇಶವನ್ನು ನಿರ್ಬಂಧಿಸಿ, ಪರೀಕ್ಷೆ ನಡೆಸಿದರು. ಗೆದ್ದಲು ಗೂಡಿನ ಒಳಾಂಗಣವನ್ನು ಅನುಕರಿಸಲು ಈ ವಾತಾವರಣ ಅವಶ್ಯಕವಾಗಿತ್ತು. ಈಗ ಗೆದ್ದಲುಗಳಿಗೆ ಶಿಲೀಂಧ್ರಗಳು ಕಾಣುವುದಿಲ್ಲವಾದ್ದರಿಂದ ಇದು ಕೇವಲ ಘ್ರಾಣ ಪರೀಕ್ಷೆಯಾಗಿತ್ತು. ಆಗ ಉತ್ಸಾಹೀ ಸಂಶೋಧಕರ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸುವ ಅಚ್ಚರಿದಾಯಕ ಫಲಿತಾಂಶ ಹೊರಬಿತ್ತು. ಕೇವಲ ವಾಸನೆಯ ಆಧಾರದ ಮೇಲೆ ಗೆದ್ದಲುಗಳು ಎರಡೂ ಶಿಲೀಂಧ್ರಗಳ ನಡುವೆ ವ್ಯತ್ಯಾಸ ಗುರುತಿಸಿ, ಕಳೆ ಶಿಲೀಂಧ್ರವನ್ನು ಹೆಚ್ಚು ಆಳಕ್ಕೆ ಹೂತು ಹಾಕುವ ತಮ್ಮ ಎಂದಿನ ಕಾರ್ಯವನ್ನು ಮುಂದುವರೆಸಿದ್ದವು!

ಹಾಗಾದರೆ, ಈ ಶಿಲೀಂಧ್ರಗಳ ವಾಸನೆಯ ನಡುವೆ ರಾಸಾಯನಿಕವಾಗಿ ನಿಜವಾಗಲೂ ವ್ಯತ್ಯಾಸವಿದೆಯೇ ಎಂದು ತಿಳಿಯುವ ನಿಟ್ಟಿನಲ್ಲಿ  ಸಂಶೋಧಕರು ತಮ್ಮ ಅಧ್ಯಯನದ ಗಮನವನ್ನು ಕೇಂದ್ರೀಕರಿಸಿದರು. 'ಸೂಡೊಕ್ಸಿಲೈರಿಯಾ' ಮತ್ತು 'ಟರ್ಮಿಟಮೈಸೆಸ್'ನ ವಾಸನೆಯ ಪ್ರೊಫೈಲ್‌ಗಳನ್ನು ಹೋಲಿಕೆ ಮಾಡಿದಾಗ, 'ಅರಿಸ್ಟಾಲೀನ್' ಮತ್ತು 'ವೈರಿಡಿಫ್ಲೋರಲ್'ನಂತಹ 'ಸೆಸ್ಕ್ವಿಟರ್ಪೆನ್' ಸಂಯುಕ್ತಗಳು ವಿಶೇಷವಾಗಿ ಕಳೆ ಶಿಲೀಂಧ್ರದಲ್ಲಿ ಮಾತ್ರ ಇದ್ದದ್ದು ಕಂಡುಬಂದಿದೆ ಮತ್ತು ವಾಸನೆಯ ವ್ಯತ್ಯಾಸಕ್ಕೆ ಕಾರಣ ಇವೇ ರಾಸಾಯನಿಕಗಳು ಎಂದು ಖಾತ್ರಿಯಾಗಿದೆ.

ಮತ್ತೊಂದು ಪ್ರಯೋಗದಲ್ಲಿ, ಸಂಶೋಧಕರು 'ಸೂಡೋಕ್ಸಿಲ್ಯಾರಿಯಾ' ಮತ್ತು ಒಂದು ಖಾಲಿ ಪ್ಲಗ್ಗನ್ನು ಬಳಸುತ್ತಾರೆ. ಅಂದರೆ, ಇಲ್ಲಿ ಕಳೆ ಶಿಲೀಂಧ್ರದ ಜೊತೆಗೆ ಆಹಾರ ಬೆಳೆ ಶಿಲೀಂಧ್ರವನ್ನು ಬಳಸಲಾಗಿಲ್ಲ; ಆಗಲೂ ಕಳೆ ಶಿಲೀಂಧ್ರವನ್ನು ಇನ್ನಿಲ್ಲವಾಗಿಸುವ ಸಲುವಾಗಿ, ಅವುಗಳನ್ನು ಸಮಾಧಿ ಮಾಡುವ ಪ್ರಕ್ರಿಯೆಯನ್ನು ಗೆದ್ದಲುಗಳು ಬಿಡಲಿಲ್ಲ.

ಆದರೂ, ತಮಗೆ ಬೇಡವಾದ ಕಳೆ ಶಿಲೀಂಧ್ರಗಳ ಮೇಲೆ 'ಬೋಲಸ್' ಅಥವಾ ಮಣ್ಣನ್ನು ಪೇರಿಸುವ ಗೆದ್ದಲುಗಳು, ತಮಗೆ ಬೇಕಾದ ಆಹಾರ ಬೆಳೆ ಶಿಲೀಂಧ್ರಗಳ ಮೇಲೆ ಮಣ್ಣನ್ನು ಅಥವಾ 'ಬೋಲಸ್'ಅನ್ನು ಪೇರಿಸುವ ಅವಶ್ಯಕತೆ ಏನಿದೆ? ಅವುಗಳನ್ನು ಇರುವ ಹಾಗೆಯೇ ಬೆಳೆಯಲು ಬಿಡಬಹುದಲ್ಲ, ಇದರ ಹಿಂದಿನ ಮರ್ಮವೇನು ಎಂದು ಯೋಚಿಸಿದ ಸಂಶೋಧಕರು, ಅಧ್ಯಯನದ ನಂತರ ಕಂಡುಕೊಂಡ ಸತ್ಯ ಮತ್ತಷ್ಟು ಅಚ್ಚರಿದಾಯಕ.

ಕೃಷಿಕ ಗೆದ್ದಲುಗಳು, ಆಹಾರ ಬೆಳೆ ಶಿಲೀಂಧ್ರಗಳ ಮೇಲೆ ಮಣ್ಣು ಅಥವಾ 'ಬೋಲಸ್'ಅನ್ನು ಪೇರಿಸುವಾಗ ಜೊತೆಯಲ್ಲೇ ಕಳೆ ಶಿಲೀಂಧ್ರಗಳಿಂದ ಇವುಗಳನ್ನು ಕಾಪಾಡಲು ಬೇಕಾದ ಔಷಧಿಯುಕ್ತ ಲಾಲಾರಸವನ್ನೂ ಸ್ರವಿಸುತ್ತವೆಯಂತೆ! ಹೀಗಾಗಿ ಕಳೆ ಶಿಲೀಂಧ್ರಗಳಿಂದ ಆಗಬಹುದಾದ ಅಪಾಯವನ್ನು ತಪ್ಪಿಸುವ ಕ್ರಮ ಇದು ಎಂದು ಕಂಡುಬಂದಿದೆ.

ಯಾವುದೇ ಬಗೆಯ ವ್ಯವಸಾಯದಲ್ಲಿ ಕೀಟನಾಶಕಗಳ ವಿವೇಚನಾರಹಿತ ಬಳಕೆ ಸಾರ್ವತ್ರಿಕ ಸಮಸ್ಯೆಯಾಗಿದೆ. ಇದಕ್ಕೆ ಪರಿಹಾರ ಹುಡುಕಲು ನಾವು, ಕಳೆಗಳನ್ನು ನಿಯಂತ್ರಿಸುವ ಕಲೆಯನ್ನು ಕರತಲಾಮಲಕ ಮಾಡಿಕೊಂಡಿರುವ ಈ ಕೃಷಿಕ ಗೆದ್ದಲುಗಳಿಂದ ಹೊಳಹುಗಳನ್ನು ಪಡೆಯಬಹುದೇನೋ!

ಗುಬ್ಬಿ ಲ್ಯಾಬ್ಸ್
(ಸಂಶೋಧನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಒಂದು ಸಾಮಾಜಿಕ ಉದ್ಯಮ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT