ಭದ್ರಾವತಿ: ‘ಕೈಗಾರಿಕಾ ನಗರದ ಇಂದಿನ ದುಸ್ಥಿತಿಗೆ ಮೂರು ಪಕ್ಷಗಳು ಹಾಗೂ ಚುನಾಯಿತ ಜನಪ್ರತಿನಿಧಿಗಳು ಕಾರಣ’ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಹ ಸಂಚಾಲಕ ಶಿವಕುಮಾರ್ ದೂರಿದರು.
ನಗರದ ಸುನಂದ ಸಭಾಂಗಣದಲ್ಲಿ ಈಚೆಗೆ ಜರುಗಿದ ಪಕ್ಷದ ಕಾರ್ಯಕರ್ತರ ಸಭೆ, ಕ್ಷೇತ್ರದ ಅಭ್ಯರ್ಥಿ ಘೋಷಣೆಯಲ್ಲಿ ಮಾತನಾಡಿದರು.
ಇಲ್ಲಿಂದ ಆಯ್ಕೆಯಾದ ಪಕ್ಷದ ಅಭ್ಯರ್ಥಿಗಳು ಹಾಗೂ ವ್ಯಕ್ತಿಗಳು ಕಾರ್ಖಾನೆಗಳ ಉಳಿವಿಗೆ ಬೇಕಾದ ಇಚ್ಛಾಶಕ್ತಿ ಪ್ರಕಟ ಮಾಡದ ಕಾರಣ ಇತಿಹಾಸದ ಎಂಪಿಎಂ., ವಿಐಎಸ್ಎಲ್ ಕಾರ್ಖಾನೆಗಳು ಅವನತಿಯ ಹಾದಿ ಹಿಡಿದವು ಎಂದು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಪಕ್ಷದ ರಾಜ್ಯ ಸಹಕಾರ್ಯದರ್ಶಿ ವಿಜಯಶರ್ಮ ಮಾತನಾಡಿ, ‘ಪಕ್ಷದ ಕಾರ್ಯಕರ್ತರು ಕ್ಷೇತ್ರದ ಸಮಸ್ಯೆ ನಿಭಾಯಿಸುವ ನಿಟ್ಟಿನಲ್ಲಿ ಪಕ್ಷ ರೂಪಿಸಿರುವ ಯೋಜನೆಗಳ ವಿಚಾರವನ್ನು ಮನೆಗಳಿಗೆ ತಲುಪಿಸುವ ಕೆಲಸ ಮಾಡಲಿದೆ’ ಎಂದು ಹೇಳಿದರು.
ಪಕ್ಷದ ನಿಯೋಜಿತ ಅಭ್ಯರ್ಥಿಯಾಗಿ ಎಚ್. ರವಿಕುಮಾರ್ ಅವರನ್ನು ರಾಜ್ಯ ಹಾಗೂ ಕೇಂದ್ರ ನಾಯಕತ್ವಕ್ಕೆ ಶಿಫಾರಸು ಮಾಡಲಾಗುವುದು ಎಂದು ಮುಖಂಡರು ಘೋಷಿಸಿದರು.