ರಾಮನಗರ: ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಇರುವ ಪಂಚಮುಖಿ ಆಂಜನೇಯ ದೇವಸ್ಥಾನಕ್ಕೆ ಸೋಮವಾರ ಬೆಳಿಗ್ಗೆ ನಿತ್ಯಾನಂದ ಸ್ವಾಮೀಜಿ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ದೇವಸ್ಥಾನದ ಉದ್ಘಾಟನೆ ಕಾರ್ಯಕ್ರಮದ ಚಿತ್ರೀಕರಣಕ್ಕೆ ಮಾಧ್ಯಮದವರಿಗೆ ನಿತ್ಯಾನಂದನ ಶಿಷ್ಯರು ಅಡ್ಡಿಪಡಿಸಿದ ಘಟನೆಯೂ ನಡೆಯಿತು. ಈ ಸಂದರ್ಭ ಮಾತಿನ ಚಕಮಕಿ ನಡೆಯಿತು. ಪೂಜೆ ಸಲ್ಲಿಸಿದ ಬಳಿಕ ಹಿಂಭಾಗದಿಂದ ನಿತ್ಯಾನಂದ ನಿರ್ಗಮಿಸಿದರು.
ಬೆಳಿಗ್ಗೆ 10ರ ಸುಮಾರಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲೆಂದು ರಾಮನಗರಕ್ಕೆ ಬಂದಿದ್ದ ನಿತ್ಯಾನಂದ ಮಾಧ್ಯಮದವರು ಸ್ಥಳದಲ್ಲಿ ಇರುವ ಸುದ್ದಿ ತಿಳಿದು ದೂರದಲ್ಲಿಯೇ ಉಳಿದಿದ್ದರು. ಕಡೆಗೆ 11 ಗಂಟೆ ಸುಮಾರಿಗೆ ದೇವಸ್ಥಾನಕ್ಕೆ ಬಂದ ಅವರು ಸುಮಾರು ಹತ್ತು ನಿಮಿಷ ಕಾಲ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.