ಲಖನೌ: ಬಾಲಕಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪ ಎದುರಿಸುತ್ತಿದ್ದ ಯುವಕನೊಬ್ಬ, ಗ್ರಾಮದ ಪಂಚಾಯತ್ ಮುಖಂಡರು ನೀಡಿದ ಶಿಕ್ಷೆ ಆದೇಶದಿಂದ ಅವಮಾನಗೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಯುವಕನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸಹರಾನ್ಪುರ ಜಿಲ್ಲೆಯ ಇಂದಿರಾ ಕಾಲೊನಿಯ ಬಾಲಕಿಯೊಬ್ಬಳಿಗೆ ಭಾನುವಾರ ಈ ಯುವಕ ಲೈಂಗಿಕ ಕಿರುಕುಳ ನೀಡಿದ್ದ ಎಂದು ಆರೋಪಿಸಲಾಗಿತ್ತು. ನಂತರ ಅವನನ್ನು ಹಿಡಿದಿದ್ದ ಗ್ರಾಮಸ್ಥರು, ಪಂಚಾಯತ್ ಮುಂದೆ ಕರೆದೊಯ್ದಿದ್ದರು.
ವಿಚಾರಣೆ ನಡೆಸಿದ ಪಂಚಾಯತ್ ಮುಖಂಡರು, ಅವನನ್ನು ತಪ್ಪಿತಸ್ಥ ಎಂದು ಘೋಷಿಸಿ, ಶಿಕ್ಷಿಸುವಂತೆ ನೆರೆದಿದ್ದವರಿಗೆ ಹೇಳಲಾಗಿತ್ತು. ಆನಂತರ ಯುವಕನನ್ನು ಭಾಗಶಃ ಬೆತ್ತಲೆ ಮಾಡಿ ಥಳಿಸಲಾಯಿತು. ಎಲ್ಲರ ಮುಂದೆ ಮೂತ್ರ ಕುಡಿಯಲು ಒತ್ತಾಯಿಸಲಾಯಿತು.
‘ನನ್ನ ತಮ್ಮ ಯಾರಿಗೂ ಕಿರುಕುಳ ನೀಡಿಲ್ಲ. ಹಳೆ ವೈಷಮ್ಯಕ್ಕೆ ಹೀಗೆ ಮಾಡಿದ್ದಾರೆ. ಪಂಚಾಯತ್ನಲ್ಲಿ ಅವನನ್ನು ಶಿಕ್ಷಿಸಿದ್ದರಿಂದ ಅವಮಾನಿತನಾದ’ ಎಂದು ಸಹೋದರ ಪ್ರತಿಕ್ರಿಯಿಸಿದ್ದಾರೆ.