ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ಆಶಯದಂತೆ‌ ಸರ್ಕಾರಗಳು ನಡೆಯಬೇಕು

Last Updated 6 ಮಾರ್ಚ್ 2018, 9:47 IST
ಅಕ್ಷರ ಗಾತ್ರ

ಮಂಗಳೂರು: ಸರ್ಕಾರಗಳು ಅಧಿಕಾರಿಗಳು, ಕೆಲವೇ ಕೆಲವು ಜನರ ಆಶಯದಂತೆ ನಡೆಯಬಾರದು. ಸರ್ಕಾರಗಳು ಜನರ ಆಶಯಕ್ಕೆ ತಕ್ಕಂತೆ ನಡೆಯಬೇಕು. ಅದಕ್ಕೆ ಜನರೂ‌ ಮುಂದಾಗಬೇಕು.‌ ಬುದ್ಧಿ ಜೀವಿಗಳು ಸರ್ಕಾರದ ವೈಫಲ್ಯಗಳ ಬಗ್ಗೆ ಚರ್ಚೆ ಮಾಡಬೇಕು‌ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ನಗರದಲ್ಲಿ ಮಂಗಳವಾರ ಬುದ್ಧಿಜೀವಿಗಳು, ಧರ್ಮಗುರುಗಳು, ಪ್ರಜ್ಞಾವಂತ ಮತದಾರರ ಜತೆ ಸಂವಾದದಲ್ಲಿ‌ಅವರು‌ ಮಾತನಾಡಿದರು.

ಕೇವಲ ಐದು ವರ್ಷಕ್ಕೊಮ್ಮೆ ಮತದಾನ ಮಾಡಿದರೆ ನಮ್ಮ ಕೆಲಸ ಮುಗಿಯಿತು ಎಂಬ ಮನೋಭಾವವನ್ನು ತಲೆಯಿಂದ ತೆಗೆದು ಹಾಕಬೇಕು. ಜನರ ಭಾವನೆಗಳನ್ನು ಅರಿತುಕೊಂಡು ಸರ್ಕಾರಗಳು ಕೆಲಸ ಮಾಡುವಂತಹ ವಾತಾವರಣ ನಿರ್ಮಾಣ ಮಾಡಬೇಕು ಎಂದರು.

ಕರಾವಳಿಯಲ್ಲಿ ಶಾಂತಿ, ನೆಮ್ಮದಿ ನೆಲೆಸಬೇಕು ಎಂಬುದು ಇಲ್ಲಿಯ ಜನರ ಆಶಯ. ಯಾರೋ ಮಾಡಿದ ತಪ್ಪಿನಿಂದ ಇಂತಹ ದುಷ್ಕೃತ್ಯಗಳು ನಡೆಯುತ್ತಿವೆ. ಆದರೆ ಇಂತಹ ಘಟನೆಗಳನ್ನು ಹತ್ತಿಕ್ಕುವುದು ಸರ್ಕಾರದ ಕರ್ತವ್ಯ. ಅಶಾಂತಿಯ ವಾತಾವರಣ ನಿರ್ಮಾಣ ಆದಾಗ, ಮುಖ್ಯಮಂತ್ರಿಗಳು ಇಲ್ಲಿನ ವಿವಿಧ ಸಮಾಜದ ಮುಖಂಡರ ಸಭೆ ನಡೆಸಿ, ಪರಿಹಾರ ಕಂಡುಕೊಳ್ಳಬೇಕಿತ್ತು. ನಿಮ್ಮಂಥವರ ಜತೆ ಚರ್ಚಿಸಿದಲ್ಲಿ ಖಂಡಿತವಾಗಿಯೂ ಸಮಸ್ಯೆಗೆ ಪರಿಹಾರ ದೊರೆಯುತ್ತದೆ. ಇಂತಹ ಪ್ರಯತ್ನ ಮಾಡಲು ಮುಖ್ಯಮಂತ್ರಿಗೆ ಏನು ತೊಂದರೆ ಎಂದು‌ ಪ್ರಶ್ನಿಸಿದರು.

ಸಂವಿಧಾನವನ್ನು ಬದಲಾವಣೆ ಮಾಡುವುದು ಅಸಾಧ್ಯದ ಮಾತು. ಡಾ.‌ಅಂಬೇಡ್ಕರ್ ಅವರು ಅಷ್ಟೊಂದು ಗಟ್ಟಿಯಾಗಿ ಸಂವಿಧಾನ ರಚಿಸಿದ್ದಾರೆ. ಎಂಥ ಸರ್ಕಾರ ಬಂದರೂ ಸಂವಿಧಾನ ಬದಲಾವಣೆ ಅಸಾಧ್ಯ ಎಂದರು.

ಮುಖ್ಯಮಂತ್ರಿ ಕೇವಲ‌ ಆ ಪಕ್ಷದ ಅಥವಾ ಆ ಸಮುದಾಯದ ಮುಖ್ಯಮಂತ್ರಿಯಲ್ಲ. ಅವರು ಪ್ರತಿಯೊಬ್ಬ ವ್ಯಕ್ತಿಯ, ಸಮುದಾಯದ ರಕ್ಷಕ ಎಂಬುದನ್ನು ಅರ್ಥೈಸಿಕೊಳ್ಳಬೇಕು. ಧರ್ಮ, ನಂಬಿಕೆಗಳ ಮೇಲೆ ದಾಳಿ ಆದಾಗ ಅದನ್ನು ಹತ್ತಿಕ್ಕಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ನಾನು 20 ತಿಂಗಳು ಮುಖ್ಯಮಂತ್ರಿ ಆಗಿದ್ದೆ. ಆಗ ಒಂದೇ ಒಂದು ಕೋಮುಗಲಭೆ ಆಗಿರಲಿಲ್ಲ. ನಾನು ಅಧಿಕಾರಕ್ಕೆ ಬಂದಿದ್ದೇ ಆದಲ್ಲಿ ಕರಾವಳಿಯಲ್ಲಿ ಸೌಹಾರ್ದದ ವಾತಾವರಣ ನಿರ್ಮಾಣಕ್ಕೆ ಪ್ರಥಮ ಆದ್ಯತೆ ನೀಡುತ್ತೇನೆ. ದುಷ್ಕೃತ್ಯಗಳನ್ನು ಮಾಡುವವರು ಎಂಪಿ, ಎಂಎಲ್ಎ ಸೇರಿದಂತೆ ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರೂ ಅಂಥವರ ವಿರುದ್ಧ ಕ್ರಮ‌ಕೈಗೊಳ್ಳುತ್ತೇನೆ. ನಿಮ್ಮ ಆತಂಕಕ್ಕೆ ಪೂರ್ಣವಿರಾಮ ನೀಡುತ್ತೇನೆ.‌ ಎಲ್ಲರಿಗೂ ಅಧಿಕಾರ ನೀಡಿದ್ದೀರಿ.‌ ನನಗೂ ಒಂದು ಅವಕಾಶ ನೀಡಿ ಎಂದು‌ ಮನವಿ‌ ಮಾಡಿದರು.

ರಾಜ್ಯ ಉಳಿಸುವ ದೃಷ್ಟಿಯಿಂದ ಮಾಧ್ಯಮಗಳು ಸಹಯೋಗ ನೀಡಬೇಕು ಎಂದು ಹೇಳಿದರು.

ಎತ್ತಿನಹೊಳೆ ವಿಚಾರದಲ್ಲಿ ವೈಜ್ಞಾನಿಕ ತೀರ್ಮಾನ ಅಗತ್ಯವಾಗಿದೆ. ಕೋಲಾರ, ಚಿಕ್ಕಬಳ್ಳಾಪುರದಲ್ಲಿ‌ ನೀರಿನ ಸಮಸ್ಯೆ ಇದೆ. ಹಾಗಂತ ಕರಾವಳಿ ಭಾಗದ ಜನರಿಗೆ ತೊಂದರೆ ನೀಡಿ, ಅಲ್ಲಿಗೆ ನೀರನ್ನು ಹರಿಸುವುದು ನನ್ನ ಉದ್ದೇಶವಿಲ್ಲ. ರಾಜ್ಯದ ಪರಿಸರದ‌ ಮೇಲೆ‌ ತೊಂದರೆ ಆಗದ ರೀತಿಯಲ್ಲಿ, ಜನರಿಗೆ ತೊಂದರೆ ಆಗದ ರೀತಿಯಲ್ಲಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತೇನೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT