ಯಾದಗಿರಿ: ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳ ತಂಡ ಎರಡು ಬಾಲ್ಯ ವಿವಾಹಗಳನ್ನು ತಡೆಯುವಲ್ಲಿ ಯಶಸ್ವಿಯಾಗಿದೆ.
ಯಾದಗಿರಿ ತಾಲ್ಲೂಕಿನ ಆರ್. ಹೊಸಳ್ಳಿ ತಾಂಡಾ ಹಾಗೂ ಕಟಗಿ ಶಹಾಪುರಕ್ಕೆ ತೆರಳಿ ಮದುವೆ ತಡೆದಿದೆ.
ಯಾದಗಿರಿ ತಾಲ್ಲೂಕಿನ ಆರ್. ಹೊಸಳ್ಳಿ ತಾಂಡಾದ 17 ವರ್ಷ ಬಾಲಕಿ ಯನ್ನು ಅರಕೇರಾ (ಕೆ) ತಾಂಡಾದ 21 ವರ್ಷದ ಹುಡುಗ ನೊಂದಿಗೆ ವಿವಾಹ ಸೋಮವಾರ ನಡೆಯಬೇಕಿತ್ತು.
ಕಟಗಿ ಶಹಾಪುರ ಗ್ರಾಮದಲ್ಲಿ ಮಾರ್ಚ್ ಕೊನೆ ವಾರದಲ್ಲಿ 16 ವರ್ಷದ ಬಾಲಕಿಯೊಂದಿಗೆ ಮುಂಬೈನಲ್ಲಿರುವ ಹುಡುಗಿಯ ಸಹೋದರ ಮಾವ 25 ವರ್ಷದ ಯುವಕನೊಂದಿಗೆ ಮದುವೆ ನಿಶ್ಚಯವಾಗಿತ್ತು.
ಇಲಾಖೆಯ ಮಕ್ಕಳ ರಕ್ಷಣಾ ಅಧಿಕಾರಿ ಗೋವಿಂದ ರಾಠೋಡ ನೇತೃತ್ವದ ತಂಡ ಪೊಲೀಸ್ ಸಿಬ್ಬಂದಿಯೊಂದಿಗೆ ದಾಳಿ ನಡೆಸಿದೆ.
‘ಬಾಲ್ಯ ವಿವಾಹ ಕಾನೂನು ಪ್ರಕಾರ ಅಪರಾಧವಾಗಿದ್ದು, ಕಠಿಣ ಶಿಕ್ಷೆ ಗುರಿಯಾಗಬೇಕಾಗುತ್ತದೆ’ ಎಂದು ಪೋಷಕರಿಗೆ ಕಾನೂನು ಅರಿವು ಮೂಡಿಸಿ ಅವರಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡಿದ್ದಾರೆ. ಚೈಲ್ಡ್ ಲೈನ್ ಅಧಿಕಾರಿ ಸಾಬಯ್ಯ, ಪೊಲೀಸ್ ಸಿಬ್ಬಂದಿ ವಿಠ್ಠಲ್ ದೊರೆ ಇದ್ದರು.