ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದು ತೋರಿಸಲಿ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಲ್ಲಿ ಮಂಗಳವಾರ ಸವಾಲು ಹಾಕಿದರು.
‘ಭ್ರಷ್ಟಾಚಾರದ ವಿಚಾರದಲ್ಲಿ ಸಿದ್ದರಾಮಯ್ಯ ಬಳಿ ಯಾವುದೇ ಬಹಿರಂಗ ಚರ್ಚೆಗೆ ಹೋಗುವುದಿಲ್ಲ. ನನ್ನೊಂದಿಗೆ ಮಾತನಾಡುವ ನೈತಿಕತೆ ಅವರಿಗಿಲ್ಲ. ಅವರ ಹಗರಣಗಳ ಪಟ್ಟಿಯನ್ನು ಎಲ್ಲರಿಗೂ ಹಂಚಲಿದ್ದೇನೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.
‘ಸಾವಿರಾರು ಎಕರೆ ಲೂಟಿ ಮಾಡಿ ಜನರಿಗೆ ದ್ರೋಹ ಬಗೆದಿರುವ ಅಶೋಕ ಖೇಣಿ ಎಂಬ ಭ್ರಷ್ಟನನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಲೂಟಿಕೋರರು ಮತ್ತು ಹಗಲು ದರೋಡೆಕೋರರು ಮಾತ್ರ ಪಕ್ಷದಲ್ಲಿರಬಹುದು ಎಂಬುದನ್ನು ಕಾಂಗ್ರೆಸ್ ತೋರಿಸಿದೆ’ ಎಂದು ವ್ಯಂಗ್ಯವಾಡಿದರು.
ನಟ ಉಪೇಂದ್ರ ಬಿಜೆಪಿ ಸೇರುವ ಬಗ್ಗೆ ಯಾವುದೇ ಮಾಹಿತಿಯಿಲ್ಲ ಎಂದು ಸ್ಪಷ್ಟಪಡಿಸಿದರು.
ಹೊಸಮಠಕ್ಕೆ ಭೇಟಿ: ಯಡಿಯೂರಪ್ಪ ಅವರು ಮೈಸೂರಿನ ಹೊಸಮಠದ ಚಿದಾನಂದ ಸ್ವಾಮೀಜಿಯನ್ನು ಭೇಟಿಯಾಗಿ ಚರ್ಚಿಸಿದರು. ‘ಮಠದಲ್ಲಿ ಉಪಾಹಾರಕ್ಕೆ ಕರೆದಿದ್ದರು. ಅದಕ್ಕೆ ಇಲ್ಲಿಗೆ ಭೇಟಿ ನೀಡಿದ್ದೇನೆ. ನನಗೆ ಹಾಗೂ ಪಕ್ಷದ ಇತರ ನಾಯಕರಿಗೆ ಸ್ವಾಮೀಜಿಗಳ ಆಶೀರ್ವಾದ ಪಡೆಯುವ ಅವಕಾಶ ಲಭಿಸಿತು’ ಎಂದು ಪ್ರತಿಕ್ರಿಯಿಸಿದರು.