ಚಂಡಿಗಡ: ಇಲ್ಲಿನ ಬೀದಿ ನಾಯಿಗಳಿಗೆ ಇನ್ನು ಮುಂದೆ ‘ಸಮುದಾಯದ ನಾಯಿಗಳು’ ಎನ್ನುವ ಪಟ್ಟ ದೊರೆಯಲಿದೆ.
ಬೀದಿ ನಾಯಿಗಳ ಬಗ್ಗೆ ಜನರಲ್ಲಿರುವ ಭಾವನೆಯನ್ನು ಬದಲಾಯಿಸಲು ಚಂಡಿಗಡ ಆಡಳಿತ ಮುಂದಾಗಿದೆ. ಪ್ರಾಣಿ ಪ್ರೇಮಿಗಳು ಈ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನಲ್ಲಿ ಬೀದಿ ನಾಯಿಗಳಿಗೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ಸಂದರ್ಭದಲ್ಲಿ ವಕೀಲರಾದ ತನು ಬೇಡಿ ಅವರು ಈ ಸಲಹೆ ನೀಡಿದ್ದರು. ಇದನ್ನು ಚಂಡಿಗಡ ಆಡಳಿತ ಒಪ್ಪಿಕೊಂಡಿದೆ.
ಬೀದಿ ನಾಯಿಗಳ ಬಗ್ಗೆ ಇರುವ ಕೀಳು ಭಾವನೆ ಮತ್ತು ದ್ವೇಷ ತೊಡೆದು ಹಾಕುವ ನಿಟ್ಟಿನಲ್ಲಿ ಈ ಹೊಸ ಶಬ್ದ ಪರಿಣಾಮ ಬೀರಬೇಕು ಮತ್ತು ಸಾರ್ವಜನಿಕರಿಗೂ ಬೀದಿ ನಾಯಿಗಳ ಮಾಲೀಕತ್ವ ನೀಡುವ ಉದ್ದೇಶ ಇದಾಗಿದೆ. ಗೋಶಾಲೆಗಳ ಮಾದರಿಯಲ್ಲಿ ನಾಯಿಗಳಿಗೂ ಆಶ್ರಯ ನೀಡಲು ವಸತಿ ವ್ಯವಸ್ಥೆ ಕಲ್ಪಿಸುವ ಸಲಹೆ ನೀಡಲಾಗಿದೆ.