ರಾಯಪುರ/ಹೈದರಾಬಾದ್: ಛತ್ತೀಸಗಡದ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲರು ಮೂರು ಬಸ್ ಮತ್ತು ಮೂರು ಲಾರಿಗಳಿಗೆ ಸೋಮವಾರ ರಾತ್ರಿ ಬೆಂಕಿ ಹಚ್ಚಿದ್ದಾರೆ. ಬಸ್ ಪ್ರಯಾಣಿಕರ ಜತೆಗಿದ್ದ ಪೊಲೀಸ್ ಕಾನ್ಸ್ಟೆಬಲ್ವೊಬ್ಬರನ್ನು ನಕ್ಸಲರು ಗುಂಡಿಕ್ಕಿ ಸಾಯಿಸಿದ್ದಾರೆ.
‘ಖಾಸಗಿ ಬಸ್ಗಳು ಸುಕ್ಮಾ ಮೂಲಕ ಹೈದರಾಬಾದ್ಗೆ ತೆರಳುತ್ತಿದ್ದವು. ಪೆದ್ದಕುಡ್ತಿ ಮತ್ತು ಪೆಂಟಾ ಗ್ರಾಮಗಳ ನಡುವೆ ಬಸ್ಗಳನ್ನು ತಡೆದ ಶಸ್ತ್ರಸಜ್ಜಿತ ನಕ್ಸಲರು ಪ್ರಯಾಣಿಕರನ್ನು ಕೆಳಗಿಳಿಸಿ ಬೆಂಕಿ ಹಚ್ಚಿದ್ದಾರೆ. ಸೋಮವಾರ ರಾತ್ರಿ 10ರಿಂದ 11 ಗಂಟೆ ವೇಳೆ ಈ ಕೃತ್ಯ ನಡೆದಿದೆ’ ಎಂದು ಡಿಐಜಿ ಪಿ.ಸುಂದರರಾಜ್ ತಿಳಿಸಿದ್ದಾರೆ.
‘ನಾಲ್ಕು ವಾಹನಗಳಿಗೆ ಒಂದೇ ಸ್ಥಳದಲ್ಲಿ ಬೆಂಕಿ ಹಚ್ಚಲಾಗಿದೆ. ಎರಡು ವಾಹನಗಳಿಗೆ 300 ಮೀಟರ್ ಅಂತರದಲ್ಲಿ ಬೆಂಕಿ ಹಚ್ಚಲಾಗಿದೆ. ಜಗದಲ್ಪುರ್, ದಂತೇವಾಡಾ ಮತ್ತು ಒಡಿಶಾದ ಮಲ್ಕನ್ಗಿರಿಯಿಂದ ಮೂರು ಬಸ್ಗಳು ಹೈದರಾಬಾದ್ಗೆ ತೆರಳುತ್ತಿದ್ದವು. ಘಟನೆಯ ಮಾಹಿತಿ ದೊರೆತ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಪ್ರಯಾಣಿಕರ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಿ ಕಳುಹಿಸಲಾಯಿತು’ ಎಂದು ತಿಳಿಸಿದ್ದಾರೆ.
ಹತ್ಯೆಗೀಡಾಗಿರುವ ಛತ್ತೀಸಗಡ ಪೊಲೀಸ್ ಕಾನ್ಸ್ಟೆಬಲ್ ಸೇವೆಯಿಂದ ಅಮಾನತುಗೊಂಡಿದ್ದರು. ಬಸ್ನಲ್ಲಿ ಕುಳಿತಿದ್ದ ಇವರನ್ನು ನಕ್ಸಲರು ಗುರುತಿಸಿ ಹೊರಗೆಳೆದು ಗುಂಡಿಕ್ಕಿ ಕೊಂದಿದ್ದಾರೆ.
ಛತ್ತೀಸಗಡದ ಪುಜರಿಕಂಕರ್ ಅರಣ್ಯ ಪ್ರದೇಶದಲ್ಲಿ ಮಾರ್ಚ್ 2ರಂದು ನಡೆಸಿದ ಕಾರ್ಯಾಚರಣೆ ವಿರುದ್ಧ ನಕ್ಸಲರು ಈ ಕೃತ್ಯವೆಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ 10 ನಕ್ಸಲರು ಸಾವಿಗೀಡಾಗಿದ್ದರು. ಪೊಲೀಸರ ಈ ಕಾರ್ಯಾಚರಣೆ ವಿರೋಧಿಸಿ ನಕ್ಸಲರು ಸ್ಥಳದಲ್ಲಿ ಬ್ಯಾನರ್ ಸಹ ಹಾಕಿದ್ದಾರೆ.
ಸುರಕ್ಷಿತ ಸ್ಥಳದಲ್ಲಿರಲು ಸಲಹೆ: ಛತ್ತೀಸಗಡ ಗಡಿ ಜಿಲ್ಲೆಯಲ್ಲಿರುವ ಶಾಸಕರು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ತೆಲಂಗಾಣ ಗೃಹ ಇಲಾಖೆ ಸೂಚನೆ ನೀಡಿದೆ. ಪೊಲೀಸರಿಗೆ ಮಾಹಿತಿ ನೀಡದೆ ಯಾವುದೇ ಗ್ರಾಮಗಳಿಗೆ ಭೇಟಿ ನೀಡಬಾರದು ಎಂದು ಹೇಳಿದೆ.
ಸುರಕ್ಷಿತ ಸ್ಥಳದಲ್ಲಿರಲು ಸಲಹೆ
ಛತ್ತೀಸಗಡ ಗಡಿ ಜಿಲ್ಲೆಯಲ್ಲಿರುವ ಶಾಸಕರು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ತೆಲಂಗಾಣ ಗೃಹ ಇಲಾಖೆ ಸೂಚನೆ ನೀಡಿದೆ.
ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡದೆ ಯಾವುದೇ ಗ್ರಾಮಗಳಿಗೆ ಭೇಟಿ ನೀಡಬಾರದು. ಶಾಸಕರು ಸದ್ಯಕ್ಕೆ ಹೈದಾರಾಬಾದ್ನಲ್ಲಿರುವುದು ಹೆಚ್ಚು ಸುರಕ್ಷಿತ ಎಂದು ಸಲಹೆ ನೀಡಲಾಗಿದೆ.
ಪೊಲೀಸರ ಕಾರ್ಯಾಚರಣೆಗೆ ಪ್ರತಿಯಾಗಿ ನಕ್ಸಲರು ದಾಳಿ ನಡೆಸುತ್ತಿರುವುದರಿಂದ ಈ ಸೂಚನೆ ನೀಡಲಾಗಿದೆ. ದಾಳಿಯಿಂದಾಗಿ ಛತ್ತೀಸಗಡಕ್ಕೆ ಬಸ್ಗಳ ಸಂಚಾರ ಸೇವೆಯನ್ನು ಟಿಎಸ್ಆರ್ಟಿಸಿ ಸ್ಥಗಿತಗೊಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.