ಗುಂಡ್ಲುಪೇಟೆ: ‘ಅಸ್ಪೃಶ್ಯತೆ ಎನ್ನುವುದು ದೇಶಕ್ಕೆ ಅಂಟಿಕೊಂಡಿರುವ ಮಹಾ ಕೊಳಕು. ಅದು ಹೋಗುವವರೆಗೂ ದೇಶ ಉದ್ಧಾರವಾಗುವುದಿಲ್ಲ’ ಎಂದು ಮೈಸೂರಿನ ಉರಿಲಿಂಗಿ ಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಅಭಿಪ್ರಾಯಪಟ್ಟರು.
ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆಯಿಂದ ಮಂಗಳವಾರ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ನಾಗರಿಕ ಹಕ್ಕು ಸಂರಕ್ಷಣಾ ಕಾಯ್ದೆ ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ದೌರ್ಜನ್ಯ ಪ್ರತಿಬಂಧಕ ಅಧಿನಿಯಮದಡಿ ನಡೆದ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.
ಇಂದಿಗೂ ನಡೆಯುತ್ತಿರುವ ಮರ್ಯಾದೆಗೇಡು ಹತ್ಯೆಗಳು ಸಮಾಜದಲ್ಲಿ ಇನ್ನೂ ಅಸ್ಪೃಶ್ಯತೆ ಜಾರಿಯಲ್ಲಿದೆ ಎಂಬುದನ್ನು ತೋರಿಸುತ್ತಿವೆ. ಬಾಬಾ ಸಾಹೇಬ್ ಅಂಬೇಡ್ಕರ್ ಬರೆದ ಸಂವಿಧಾನ ದೇಶದಲ್ಲಿ ಜಾರಿಯಲ್ಲಿದೆಯೇ ಎಂಬು ದನ್ನು ಎಲ್ಲರು ಚಿಂತನೆ ಮಾಡಬೇಕಾಗಿದೆ. ಕೇವಲ ಭಾಷಣವನ್ನು ಕೇಳುವುದರಿಂದ ಅಸ್ಪೃಶ್ಯತೆ ನಾಶವಾಗುವುದಿಲ್ಲ, ಅದೊಂದು ಮಾನಸಿಕ ಕಾಯಿಲೆ ಅದನ್ನು ತಲೆಯಿಂದ ತೆಗೆಯಬೇಕು ಹೊರತು ನೂರು ಮೋದಿ ಬಂದರು ಭಾರತ ಸ್ವಚ್ಛವಾಗುವುದಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಕೆ.ಬೋಮ್ಮಯಿ, ಚೆನ್ನಪ್ಪ, ಪುರಸಭೆ ಅಧ್ಯಕ್ಷ ಪಿ.ಗಿರೀಶ್, ದಲಿತ ಮುಖಂಡರಾದ ಮಂಗಲ ಉಮೇಶ್, ಸೋಮಹಳ್ಳಿ ರವಿಕುಮಾರ್, ನಿಟ್ರೆ ಮಹದೇವ್, ಸಮಾಜ ಕಲ್ಯಾಣ ಅಧಿಕಾರಿ ಎಚ್.ಬಿಂದ್ಯಾ ಮೊದಲಾದವರು ಇದ್ದರು.