ಮೈಸೂರು: ವಿಧಾನಸಭಾ ಚುನಾವಣೆಯಿಂದಾಗಿ ಫೈಲುಗಳ ಕ್ಲೀಯರ್ ವಿಳಂಬವಾಗುತ್ತಿದೆ. ಮಾರ್ಚ್ ತಿಂಗಳ ಫೈಲುಗಳು ಈಗ ಕ್ಲೀಯರ್ ಆಗುತ್ತಿವೆ. ಇದಕ್ಕಾಗಿ ‘ಕಡತ ವಿಲೇವಾರಿ ಅಭಿಯಾನ’ ಮೂಲಕ ಆಗಸ್ಟ್ 15ರೊಳಗೆ ಎಲ್ಲ ಫೈಲುಗಳು ಕ್ಲೀಯರ್ ಆಗಬೇಕು ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಆದೇಶಿಸಿದರು.
ಗುರುವಾರ ಇಲ್ಲಿ ‘ಫೋನ್ ಇನ್ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು.
ಎಲ್ಲದಕ್ಕೂ ಪರಿಶೀಲನೆಯಲ್ಲಿದೆ, ಮುಂದೆ ಮಾಡುತ್ತೇವೆ ಎನ್ನುವ ಮಾತು ಬೇಡ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ ಅವರು, 5 ತಿಂಗಳ ನಂತರ ಫೋನ್ ಇನ್ ಕಾರ್ಯಕ್ರಮ ನಡೆದಿದೆ. ಇನ್ನು ಮುಂದೆ ಪ್ರತಿ ತಿಂಗಳ ಮೂರನೇ ಗುರುವಾರ ನಡೆಯಲಿದೆ. ಪ್ರತಿ ತಿಂಗಳು ಅನುಪಾಲನಾ ವರದಿ ಕೊಡಬೇಕು ಎಂದು ಸೂಚಿಸಿದರು.
ಆರೋಗ್ಯ, ಮಕ್ಕಳ ಮತ್ತು ಕುಟಂಬ ಕಲ್ಯಾಣ ಇಲಾಖೆ, ಶಿಕ್ಷಣ ಇಂಥ ಕೆಲ ಇಲಾಖೆಗಳ ಫೈಲುಗಳನ್ನು ಬಹುವಿಷಯಗಳ ಸಭೆಗಳಲ್ಲಿದ್ದಾಗ ಕ್ಲೀಯರ್ ಮಾಡಲಾಗದು. ಎಲ್ಲವನ್ನೂ ಜಿಲ್ಲಾಧಿಕಾರಿಯೇ ಮಾಡುತ್ತಾರೆಂದು ಕಾಯಬೇಡಿ. ದಸರಾ ಸಿದ್ಧತೆಗೆ ತೊಡಗಿಕೊಳ್ಳಬೇಕಿರುವುದರಿಂದ ಅಧಿಕಾರಿಗಳು ಚುರುಕಾಗಿ ಕೆಲಸ ಮಾಡಬೇಕೆಂದು ಹೇಳಿದರು.