ತುಮಕೂರು: ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರಿಗೆ ತಿಪಟೂರಿನ ತೇಜರಾಜ್ ಶರ್ಮಾ ಚೂರಿಯಿಂದ ಇರಿದು ಹತ್ಯೆ ನಡೆಸಿದ ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲೆಯ ಜನರು ಬೆಚ್ಚಿಬಿದ್ದರು.
ರಾಜಸ್ತಾನದಿಂದ ಬಂದಿದ್ದ ಕಾರ್ಮಿಕ ಎಂದು ಮೊದಲು ತಿಳಿದು ನಿಟ್ಟುಸಿರು ಬಿಟ್ಟರಾದರೂ ಅವರ ಕುಟುಂಬ ಅನೇಕ ವರ್ಷಗಳಿಂದ ತಿಪಟೂರಿನಲ್ಲಿದೆ. ಆತ ತಿಪಟೂರಿನಲ್ಲೇ ಓದು ಮುಗಿಸಿದ್ದ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಮತ್ತಷ್ಟು ಆತಂಕಕ್ಕೆ ಒಳಗಾದರು.
’ಕಲ್ಪತರು ನಾಡು’ ಕೀರ್ತಿಯ ಜಿಲ್ಲೆಗೆ ಇದೆಂಥ ಕಂಟಕ ಬಂತು ಎಂದು ಮರುಗಿದರು. ಶರ್ಮಾನ ಕೃತ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮೊದಲಿಗೆ ಎಸ್.ಎಸ್.ಪುರಂ ವಾಸಿ ಎಂದು ಅಲ್ಲಿನ ಮನೆಗೆ ತೆರಳಿದ ಪೊಲೀಸ್ ಅಧಿಕಾರಿಗಳು ಮನೆ ಖಾಲಿ ಮಾಡಿದ್ದಾನೆ ಎಂದು ತಿಳಿದು ನಿರಾಶೆಗೆ ಒಳಗಾದರು. ಇಲ್ಲಿಂದ ಬಿದಿರುಮಳೆ ತೋಟದ ಬಡಾವಣೆಯಲ್ಲಿ ಇದ್ದ ಎಂದು ಮಾಹಿತಿ ತಿಳಿದು ಅಲ್ಲಿಗೆ ಹೋದರು. ಬೀಗ ಹಾಕಿದ್ದ ಕೊಠಡಿ ಒಡೆಯುವಾಗ ಜನರು ಕುತೂಹಲದಿಂದ ಸೇರಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಗೋಪಿನಾಥ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ, ಡಿವೈಎಸ್ಪಿ ನಾಗರಾಜ್, ಇನ್ ಸ್ಟೆಕ್ಟರ್ ಚಂದ್ರಶೇಖರ್, ಸಬ್ ಇನ್ ಸ್ಪೆಕ್ಟರ್ ರಾಧಾಕೃಷ್ಣ ಕೊಠಡಿ ಪರಿಶೀಲಿಸಿದರು.
’ಘಟನೆ ಬೆಂಗಳೂರಿನಲ್ಲಿ ನಡೆದಿರುವುದರಿಂದ ಅಲ್ಲಿನ ಪೊಲೀಸರು ತನಿಖೆ ನಡೆಸಬೇಕಾಗಿದೆ. ಹೀಗಾಗಿ ಗುರುವಾರ ಬೆಂಗಳೂರಿನ ಪೊಲೀಸರು ನಗರಕ್ಕೆ ಬರಲಿದ್ದಾರೆ’ ಎಂದು ದಿವ್ಯಾ ಗೋಪಿನಾಥ್ ತಿಳಿಸಿದರು.