ಮೈಸೂರು: ಬೆಂಗಳೂರಿನ ಯಲಹಂಕದಲ್ಲಿ ನೆಲೆಸಿರುವ ಮಾಯಕೊಂಡ ಕ್ಷೇತ್ರದ ಶಾಸಕ ಶಿವಮೂರ್ತಿ ನಾಯ್ಕ್ ಪುತ್ರಿ ಲಕ್ಷ್ಮಿ ನಾಯ್ಕ್ ನಾಪತ್ತೆ ಪ್ರಕರಣದ ತನಿಖೆ ನಡೆಸುತ್ತಿರುವ ಬೆಂಗಳೂರು ಪೊಲೀಸರು ಗುರುವಾರ ನಸುಕಿನಲ್ಲಿ ಇಲ್ಲಿನ ರೂಸ್ಟ್ ರೆಸಾರ್ಟ್ಗೆ ಬಂದು ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿದರು.
ಈ ಹೋಟೆಲ್ನಲ್ಲಿ ತಂಗಿದ್ದ ಸಿನಿಮಾ ನಿರ್ಮಾಪಕ ಪಿ.ಸುಂದರ್ ಗೌಡ ಕುಟುಂಬದ ಸದಸ್ಯರಿಂದ ಪೊಲೀಸರು ಮಾಹಿತಿ ಕಲೆ ಹಾಕಿದರು. ಪರಸ್ಪರ ಪ್ರೀತಿಸುತ್ತಿದ್ದ ಸುಂದರ್ ಗೌಡ ಹಾಗೂ ಲಕ್ಷ್ಮಿ ನಾಯ್ಕ್ ವಿವಾಹ ಮಾಡಿಕೊಳ್ಳಲು ಇಲ್ಲಿಗೆ ಬಂದಿದ್ದರು ಎಂಬ ಸಂಗತಿ ಖಚಿತವಾಗಿಲ್ಲ.
‘ಸುಂದರ್ ಗೌಡ ಸಂಬಂಧಿಕರು ಬುಧವಾರ ಸಂಜೆಯಿಂದ ಹೋಟೆಲ್ನಲ್ಲಿ ವಾಸ್ತವ್ಯ ಹೂಡಿದ್ದಾರೆ. ನಾಲ್ಕು ದಿನಗಳ ಹಿಂದೆಯೇ ಕೊಠಡಿಗಳನ್ನು ಕಾಯ್ದಿರಿಸಿದ್ದರು. ಆದರೆ, ಪ್ರೇಮಿಗಳು ಇಲ್ಲಿಗೆ ಬಂದಿಲ್ಲ, ವಿವಾಹವೂ ನಡೆದಿಲ್ಲ’ ಎಂದು ರೂಸ್ಟ್ ರೇಸಾರ್ಟ್ ಮಾಲೀಕ ದಿಲೀಪ್ ಬಿದ್ದಪ್ಪ ಮಾಧ್ಯಮಗಳಿಗೆ ತಿಳಿಸಿದ್ದಾರೆ.
‘ಶಾಸಕರ ಪುತ್ರಿಯನ್ನು ಹುಡುಕಿಕೊಂಡು ಬುಧವಾರ ನಸುಕಿನ 4ಕ್ಕೆ ಬೆಂಗಳೂರು ಪೊಲೀಸರು ಬಂದಿದ್ದರು. ರೇಸಾರ್ಟ್ನ ಸಿ.ಸಿ ಟಿ.ವಿ. ಕ್ಯಾಮೆರಾ ಪರಿಶೀಲಿಸಿದರು. ಯುವತಿ ಇಲ್ಲದಿರುವುದು ಖಚಿತವಾದ ಬಳಿಕ ಮರಳಿದ್ದಾರೆ’ ಎಂದು ಹೇಳಿದರು.
ಚಾಮುಂಡಿಬೆಟ್ಟದ ದೇಗುಲದಲ್ಲಿ ಪ್ರೇಮಿಗಳು ವಿವಾಹವಾಗಿದ್ದಾರೆ ಎಂಬ ವದಂತಿ ಹರಿದಾಡುತ್ತಿದೆ.