ಬೆಂಗಳೂರು: ‘ಮಲ್ಯ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ಆರೋಗ್ಯದಲ್ಲಿ ಗಮನಾರ್ಹ ಚೇತರಿಕೆ ಕಾಣಿಸುತ್ತಿದೆ. ಅವರು ಗುರುವಾರ ಸಂಜೆ ಕೊಠಡಿಯಲ್ಲೇ ಕೆಲ ಸಮಯ ಹಾಸಿಗೆಯಿಂದ ಎದ್ದು ನಡೆದಾಡಿದರು. ಕುಟುಂಬದ ಸದಸ್ಯರ ಜತೆಗೂ ಮಾತನಾಡಿದರು’ ಎಂದು ಆಸ್ಪತ್ರೆ ವೈದ್ಯ ಡಾ.ದಿವಾಕರ್ ಭಟ್ ತಿಳಿಸಿದರು.
‘ಸಂಪೂರ್ಣ ಚೇತರಿಕೆಗೆ ಇನ್ನಷ್ಟು ಸಮಯದ ಅಗತ್ಯವಿದೆ. ಚಿಕಿತ್ಸೆಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ. ಈಗ ಅವರಿಗೆ ಯಾವುದೇ ಆಹಾರ ನೀಡುತ್ತಿಲ್ಲ. ಶಸ್ತ್ರಚಿಕಿತ್ಸೆ ಆಗಿ 48 ಗಂಟೆಗಳು ಕಳೆಯುವವರೆಗೂ ಆಹಾರ ನೀಡುವುದಿಲ್ಲ. ಅವರ ದೇಹಾರೋಗ್ಯದ ಸ್ಥಿತಿ ನೋಡಿಕೊಂಡು ಶುಕ್ರವಾರ ಅಥವಾ ಶನಿವಾರದಿಂದ ದ್ರವರೂಪದ ಆಹಾರ ನೀಡಲಾಗುವುದು’ ಎಂದರು.
‘ಲೋಕಾಯುಕ್ತ ನ್ಯಾಯಮೂರ್ತಿಯವರ ಎದೆಗೆ ಮತ್ತು ಹೊಟ್ಟೆಗೆ ಚೂರಿ ಇರಿತದ ಆಳ ಗಾಯವಾಗಿದ್ದು, ದೇಹದ ಮೇಲೆ ಒಟ್ಟು 11 ಕಡೆ ಗಾಯಗಳಾಗಿವೆ. ಅರ್ಧ ತಾಸು ತಡವಾಗಿ ಆಸ್ಪತ್ರೆಗೆ ಕರೆತಂದಿದ್ದರೆ ಅವರ ಜೀವಕ್ಕೆ ಅಪಾಯವಿತ್ತು’ ಎಂದು ದಿವಾಕರ್ ತಿಳಿಸಿದರು.
ಆಸ್ಪತ್ರೆಯಲ್ಲಿ ಬಿಗಿ ಭದ್ರತೆ: ಲೋಕಾಯುಕ್ತ ನ್ಯಾಯಮೂರ್ತಿ ಅವರನ್ನು ಶಸ್ತ್ರ ಚಿಕಿತ್ಸೆಯ ನಂತರ ಇರಿಸಲಾಗಿರುವ ತೀವ್ರ ನಿಗಾ ಘಟಕದ ವಾರ್ಡ್ಗೆ ಬಿಗಿ ಭದ್ರತೆ ಒದಗಿಸಲಾಗಿದೆ.