ಹಾಸನ: ಅವಧಿಗೂ ಮುನ್ನವೇ ತಮ್ಮನ್ನು ವರ್ಗ ಮಾಡಿರುವ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಕೇಂದ್ರ ಆಡಳಿತ ನ್ಯಾಯ ಮಂಡಳಿ (ಸಿಎಟಿ) ಮೆಟ್ಟಿಲೇರಿದ್ದಾರೆ.
‘ಮಾರ್ಚ್ 13ರ ವರೆಗೂ ರೋಹಿಣಿ ಅವರನ್ನು ವರ್ಗ ಮಾಡುವುದಿಲ್ಲ‘ ಎಂದು ರಾಜ್ಯ ಸರ್ಕಾರ ಸಿಎಟಿಗೆ ಹೇಳಿದ್ದು, ಅಲ್ಲಿಯವರೆಗೂ ಜಿಲ್ಲಾಧಿಕಾರಿಯಾಗಿ ಮುಂದುವರಿಯಲಿದ್ದಾರೆ.
ರೋಹಿಣಿ ಅವರನ್ನು ಯಾವ ಕಾರಣಕ್ಕೆ ವರ್ಗ ಮಾಡಲಾಗಿದೆ ಎಂಬ ಬಗ್ಗೆ ಮಾರ್ಚ್ 12ರ ಒಳಗೆ ಪ್ರತಿಕ್ರಿಯೆ ನೀಡಲಾಗುವುದು ಎಂದು ರಾಜ್ಯ ಹೆಚ್ಚುವರಿ ಅಡ್ವೋಕೇಟ್ ಜನರಲ್ ಪೊನ್ನಣ್ಣ ಅವರು ಸಿಎಟಿಗೆ ತಿಳಿಸಿದ್ದಾರೆ.
ಅದರಂತೆ ಮಾರ್ಚ್ 13ರಂದು ವಿಚಾರಣೆ ನಿಗದಿಪಡಿಸಲಾಗಿದೆ.
ಜ. 22ರಂದು ರೋಹಿಣಿ ಅವರನ್ನು ಸರ್ಕಾರ ವರ್ಗ ಮಾಡಿತ್ತು. ಚುನಾವಣಾ ಆಯೋಗದ ಆದೇಶದ ಹಿನ್ನೆಲೆಯಲ್ಲಿ ವರ್ಗಾವಣೆ ತಡೆಯಲಾಗಿತ್ತು.
ಮತ್ತೆ ವರ್ಗ ಮಾಡಲಾಗಿತ್ತಾದರೂ, ತನ್ನ ಆದೇಶವನ್ನು ಮಾರ್ಚ್ 6ರಂದು ಸರ್ಕಾರ ಹಿಂಪಡೆದಿತ್ತು. ಈಗ ಮಾರ್ಚ್ 7ರಂದು ವರ್ಗಾವಣೆ ಮಾಡಲಾಗಿದೆ. ಇದನ್ನು ಪ್ರಶ್ನಿಸಿ ರೋಹಿಣಿ ಸಿಎಟಿ ಮೊರೆ ಹೋಗಿದ್ದು, ಸರ್ಕಾರಕ್ಕೆ ಮತ್ತೊಮ್ಮೆ ಮುಜುಗರ ಉಂಟಾಗಿದೆ.