ಚಿಕ್ಕಮಗಳೂರು: ತಾಲ್ಲೂಕಿನ ಅಂಬಳೆ ಹೋಬಳಿಯ ಮಳಲೂರಿನ ಕಾಫಿ ತೋಟ, ಕಬ್ಬಿನ ಗದ್ದೆಯಲ್ಲಿ ಗುರುವಾರ ಮಧ್ಯಾಹ್ನ ಬೆಂಕಿ ಹೊತ್ತಿಕೊಂಡು ಬೆಳೆ ನಾಶವಾಗಿದೆ.
ರೈತ ಸಣ್ಣತಮ್ಮೇಗೌಡ ಅವರ ತೋಟದಲ್ಲಿ (ಸರ್ವೆ ನಂ 77) ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಡಿದೆ. ಬೆಂಕಿಯ ಕೆನ್ನಾಲಿಗೆ ಕಾಫಿ ಗಿಡಗಳು ಸುಟ್ಟಿವೆ. ಗದ್ದೆಯಲ್ಲಿನ ಕಬ್ಬು ಆಹುತಿಯಾಗಿದೆ.
ಅಗ್ನಿಶಾಮಕ ಸಿಬ್ಬಂದಿ ಸುಮಾರು ಎರಡು ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿ ಆರಿಸಿದ್ದಾರೆ. ಹುಲಿಗೌಡ, ರವಿಚಂದ್ರ, ಶಿವಣ್ಣ ಒಟ್ಟು ಏಳು ಸಿಬ್ಬಂದಿ ಕಾರ್ಯಾಚರಣೆ ಮಾಡಿ ಅಗ್ನಿ ನಂದಿಸಿದ್ದಾರೆ.
ಸಣ್ಣತಮ್ಮೇಗೌಡ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಎರಡು ಎಕರೆಯಲ್ಲಿನ ಕಾಫಿ ಗಿಡಗಳು, ಕಾಳುಮೆಣಸಿನ ಬಳ್ಳಿಗಳು ನಾಶವಾಗಿವೆ. ತೋಟದಲ್ಲಿ ಅಳವಡಿಸಿದ್ದ ಡ್ರಿಪ್ ಪೈಪುಗಳು ಸುಟ್ಟಿವೆ. ಐದು ಎಕರೆಯಲ್ಲಿದ್ದ ಕಬ್ಬು ನಾಶವಾಗಿದೆ. ಕಬ್ಬು ಕಟಾವಿಗೆ ಬಂದಿತ್ತು’ ಎಂದು ಅಳಲು ತೋಡಿಕೊಂಡರು.
ಬೆಂಕಿ: ಕಾಫಿ ಬೆಳೆ ನಾಶ
ತಾಲ್ಲೂಕಿನ ಕಸಬಾ ಹೋಬಳಿಯ ನರಗನಹಳ್ಳಿಯ ರಾಮೇಗೌಡ ಅವರ ಕಾಫಿ ತೋಟದಲ್ಲಿ ಬುಧವಾರ ಬೆಂಕಿ ಹೊತ್ತಿಕೊಂಡು ಕಾಫಿ ಬೆಳೆ, ಗಿಡಗಳು ನಾಶವಾಗಿವೆ.
ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದ್ದಾರೆ.
ರಾಮೇಗೌಡ ಪುತ್ರ ರಾಕೇಶ್ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ. ‘ಅನಾಹುತದಲ್ಲಿ ಮೂರೂವರೆ ಎಕರೆಯಲ್ಲಿನ ಕಾಫಿ ಗಿಡಗಳು, ಕಾಳುಮೆಣಸಿನ ಬಳ್ಳಿಗಳು ಆಹುತಿಯಾಗಿವೆ’ ಎಂದು ತಿಳಿಸಿದರು.