ಮುಂಬೈ: ಪಕ್ಷವು ಜನರೊಂದಿಗೆ ಸಾಂಸ್ಥಿಕವಾಗಿ ಉತ್ತಮ ಸಂಪರ್ಕ ಸಾಧಿಸಲು ಹೊಸ ಮಾದರಿಯನ್ನು ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.
ಇಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ‘ಪಕ್ಷವನ್ನು ಪುನಶ್ಚೇತನಗೊಳಿಸುವ ಸಲುವಾಗಿ ಪಕ್ಷದಲ್ಲಿನ ಯುವಕರು ಹಾಗೂ ಹಿರಿಯ ನಾಯಕರೊಡನೆ ಸಮತೋಲನ ಕಾಪಾಡಲು ರಾಹುಲ್ ಬಯಸುತ್ತಿದ್ದಾರೆ. ಆದರೆ ಇದು ಸುಲಭದ ವಿಚಾರವಲ್ಲ’ ಎಂದು ಹೇಳಿದರು.
ಈಶಾನ್ಯ ರಾಜ್ಯಗಳ ಮತ ಎಣಿಕೆ ಸಂದರ್ಭದಲ್ಲಿ ಪಕ್ಷದ ಅಧ್ಯಕ್ಷ ರಾಹುಲ್ ದೇಶದಲ್ಲಿ ಇರಲಿಲ್ಲ ಎನ್ನುವ ಕುರಿತಾಗಿ ಕೇಳಿ ಬಂದಿದ್ದ ದೂರುಗಳ ಸಂಬಂಧ ಪ್ರತಿಕ್ರಿಯಿಸಿದ ಅವರು, ‘ಚುನಾವಣೆ ಮುಕ್ತಾಯವಾದ ಬಳಿಕ ತಮ್ಮ ಅಜ್ಜಿಯನ್ನು ನೋಡಿ ಬರುವ ಸಲುವಾಗಿ ರಾಹುಲ್ ಮೂರು ದಿನಗಳ ಕಾಲ ಇಟಲಿಗೆ ತೆರಳಿದ್ದರು’ ಎಂದರು.
ಮಗಳು ಪ್ರಿಯಾಂಕ ಗಾಂಧಿ ರಾಜಕೀಯ ಪ್ರವೇಶ ಕುರಿತೂ ಮಾತನಾಡಿದ ಸೋನಿಯಾ ಗಾಂಧಿ, ‘ಅದು ಪ್ರಿಯಾಂಕಾಗೆ ಬಿಟ್ಟ ವಿಚಾರ. ಸದ್ಯ ಅವರು ತಮ್ಮ ಮಕ್ಕಳೊಂದಿಗೆ ಸಮಯ ಕಳೆಯುತ್ತಿದ್ದಾರೆ. ಭವಿಷ್ಯದಲ್ಲಿ ಏನಾಗಲಿದೆ ಎನ್ನುವುದು ಯಾರಿಗೂ ಗೊತ್ತಿಲ್ಲ’ ಎಂದಿದ್ದಾರೆ.
‘ಸಾರ್ವಜನಿಕವಾಗಿ ಮಾತನಾಡುವ ಸಂದರ್ಭಗಳಲ್ಲಿ ಸ್ವಾಭಾವಿಕವಾಗಿ ಮಾತನಾಡುವುದು ನನಗೆ ಸಾಧ್ಯವಾಗುವುದಿಲ್ಲ. ಆದ್ದರಿಂದಲೇ ನಾನು ಲೀಡರ್ ಎನ್ನುವುದಕ್ಕಿಂತಲೂ ಹೆಚ್ಚಾಗಿ ರೀಡರ್ ಎಂದೇ ಕರೆಸಿಕೊಂಡಿದ್ದೇನೆ’ ಎಂದು ತಮ್ಮ ಇತಿಮಿತಿಗಳ ಬಗ್ಗೆಯೂ ಹೇಳಿಕೊಂಡಿದ್ದಾರೆ.