ಚಿಕ್ಕಮಗಳೂರು: ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಕಠಿಣ ಕಾನೂನಿನ ಅಗತ್ಯ ಇದೆ ಎಂದು ಅಕ್ಕಮಹಾದೇವಿ ವೇದಿಕೆ ಅಧ್ಯಕ್ಷೆ ಗೌರಮ್ಮ ಬಸವೇಗೌಡ ಅಭಿಪ್ರಾಯಪಟ್ಟರು.
ನಗರದ ವಿರಕ್ತಮಠದ ಬಸವಮಂದಿರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಮಹಿಳಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಸಾರ್ವಜನಿಕರಲ್ಲಿ ಕಠಿಣ ಶಿಕ್ಷೆ ಭಯ ಉಂಟಾಗಬೇಕು. ಆಗ ಮಾತ್ರ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ ಕಡಿಮೆಯಾಗುತ್ತವೆ. ದಂಪತಿ ನಡುವೆ ಮೇಲು ಕೀಳು ಭಾವ ಬರಬಾರದು. ಸಮಾನತೆ ಕಾಯ್ದುಕೊಳ್ಳಬೇಕು ಎಂದರು.
ಮನಃಶಾಸ್ತ್ರಜ್ಞೆ ಜಯಶ್ರೀ ಭಟ್ ಮಾತನಾಡಿ, ‘ಮಹಿಳೆಯರು ಸ್ವಾತಂತ್ರ್ಯದ ಹೆಸರಲ್ಲಿ ಸ್ವೇಚ್ಛಾಚಾರ ನಡೆಸಬಾರದು. ಅರೆಬರೆ ಬಟ್ಟೆ ತೊಡಬಾರದು. ಗೌರವ ಭಾವ ಮೂಡುವಂತೆ ಬಟ್ಟೆ ಧರಿಸಬೇಕು’ ಎಂದರು.
12ನೇ ಶತಮಾನದಲ್ಲಿ ಬಸವಣ್ಣನವರು ಮಹಿಳೆಯರ ಸ್ವಾತಂತ್ರ್ಯಕ್ಕಾಗಿ ವಚನ ಚಳವಳಿ ನಡೆಸಿದರು. ಅವರ ವಚನಗಳನ್ನು ಜನರು ಅರ್ಥಮಾಡಿಕೊಂಡು ಜೀವನದಲ್ಲಿ ಅಳವಡಿಸಕೊಂಡರೆ ಸಮಾಜದಲ್ಲಿ ಮಹಿಳೆಯರಿಗೆ ಸಮಾನತೆ ದೊರೆಯಯುವುದು ಎಂದರು.
ಸಾಹಿತಿಗಳಾದ ಕಲ್ಯಾಣಮ್ಮ ಲಂಗೋಟಿ, ಸುಶೀಲಾ ಸದಾಶಿವಯ್ಯ, ಕವಯತ್ರಿ ಫರ್ಜಾನಾ ರಿಜ್ವಾನ್, ನಗರಸಭೆ ಸದಸ್ಯ ಎಚ್.ಡಿ.ತಮ್ಮಯ್ಯ ಇದ್ದರು.