ಉಡುಪಿ: ಪಡುಬಿದ್ರಿಯ ಸಾಂತೂರು ಗ್ರಾಮದ ಕಾಂಜರಕಟ್ಟೆ ಎಂಬಲ್ಲಿ ಕೆಲ ದಿನಗಳ ಹಿಂದೆ ನಡೆದಿದ್ದ ರೌಡಿ ನವೀನ್ ಡಿಸೋಜ ಕೊಲೆ ಪ್ರಕರಣದ ಐದು ಮಂದಿ ಆರೋಪಿಗಳನ್ನು ಕಾಪು ಪೊಲೀಸರು ಬಂಧಿಸಿದ್ದಾರೆ.
ಇನ್ನಾದ ಕಿಶನ್ ಹೆಗ್ಡೆ (32), ಗುಂಡಿ ಬೈಲಿನ ರಮೇಶ್ ಪೂಜಾರಿ (43), ಪಲಿಮಾರು ಗ್ರಾಮದ ಮಹೇಶ್ ಗಾಣಿಗ (31), ಅಬ್ಬೇಡಿಯ ಮೋಹನ್ಚಂದ್ರ ಶೆಟ್ಟಿ (23) ಹಾಗೂ ಉಪ್ಪೂರು ಕೊಳ ಲಗಿರಿಯ ನಾಗರಾಜ ಪೂಜಾರಿ (18) ಬಂಧಿತರು. ಆರೋಪಿಗಳಲ್ಲಿ ನಾಗರಾಜ ಪೂಜಾರಿ ಹೊರತುಪಡಿಸಿ ಉಳಿದವರ ಮೇಲೆ ಹಲವು ಪ್ರಕರಣಗಳಿವೆ.
ಪ್ರಕರಣದ ಬಗ್ಗೆ ಶುಕ್ರವಾರ ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಫೆಬ್ರುವರಿ 28ರಂದು ಕೊಲೆ ನಡೆದಿತ್ತು. ಕಾರಿನಲ್ಲಿ ಬಂದಿದ್ದ ಆರೋಪಿಗಳು ನವೀನ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಂದಿದ್ದರು. ಪ್ರಕರಣದಲ್ಲಿ ಯಾವುದೇ ಸುಳಿವು ಇರಲಿಲ್ಲ. ಆರೋಪಿಗಳು ಬಳಸಿದ್ದ ಕಾರಿನ ಚಿತ್ರ ಸಿ.ಸಿ. ಟಿ.ವಿ ಕ್ಯಾಮೆರಾವೊಂದರಲ್ಲಿ ರೆಕಾರ್ಡ್ ಆಗಿತ್ತು. ಅದರ ಆಧಾರದ ಮೇಲೆ ತನಿಖೆ ನಡೆಸಿದ ಸಿಬ್ಬಂದಿ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಕೊಲೆಗೆ ಹಣಕಾಸಿನ ವ್ಯವಹಾರ ಹಾಗೂ ವೈಯಕ್ತಿಯ ದ್ವೇಷ ಕಾರಣ. ಕಿಶನ್ ಹೆಗ್ಡೆಗೆ ನವೀನ್ ₹4 ಲಕ್ಷ ನೀಡಿದ್ದ. ಆದರೆ ಆತ ಅದನ್ನು ವಾಪಸ್ ನೀಡಿರಲಿಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ಅವರಿಬ್ಬರ ಮಧ್ಯೆ ಜಗಳವಾಗಿತ್ತು. ನವೀನ್ ತನ್ನನ್ನು ಕೊಲೆ ಮಾಡಲು ಯತ್ನಿಸುತ್ತಿದ್ದಾನೆ ಎಂಬ ಮಾಹಿತಿ ಆರೋಪಿಗೆ ಸಿಕ್ಕಿತ್ತು. ಆದ್ದರಿಂದ ಆತ ಸಹಚರರೊಂದಿಗೆ ಸೇರಿ ಈ ಕೊಲೆ ಮಾಡಿದ್ದಾನೆ ಎಂದರು.
ಕಾರ್ಕಳ ಉಪ ವಿಭಾಗದ ಸಹಾ ಯಕ ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಶ್ ಸೋನವಾನೆ, ಕಾಪು ಠಾಣೆ ಇನ್ಸ್ಪೆಕ್ಟರ್ ವಿ.ಎಸ್. ಹಾಲಮೂರ್ತಿ ರಾವ್, ಡಿಸಿಐಬಿ ಇನ್ಸ್ಪೆಕ್ಟರ್ ಸಂಪತ್ ಕುಮಾರ್, ಎಸ್ಐ ಎಂ.ಪಿ. ಸತೀಶ್, ರವಿ ಹಾಗೂ ಸಿಬ್ಬಂದಿಯಾದ ಸುರೇಶ್, ಸಂತೋಷ್, ರಾಮು ಹೆಗ್ಡೆ, ವಿಲ್ಫ್ರೆಡ್ ಡಿಸೋಜ, ರವಿಕುಮಾರ್, ಸುಧಾಕರ, ರಾಜೇಶ್, ಪ್ರವೀಣ್, ಶರಣಪ್ಪ, ಹರೀಶ್ ಬಾಬು, ಜಿಲ್ಲಾ ಪೊಲೀಸ್ ಕಚೇರಿಯ ಶಿವಾನಂದ, ನಿತಿನ್ ರಾವ್, ದಿನೇಶ್, ಚಾಲಕ ರಾಘವೇಂದ್ರ ಜೋಗಿ ಹಾಗೂ ಜಗದೀಶ್ ಅವರ ತಂಡ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.
***
ಪ್ರಕರಣ ಭೇದಿಸುವುದು ದೊಡ್ಡ ಸವಾಲಾಗಿತ್ತು. ಆದರೆ ಎಎಸ್ಪಿ ಅವರ ನೇತೃತ್ವದ ತಂಡ ಸತತ ಎಂಟು ದಿನಗಳ ಕಾಲ ಕೆಲಸ ಮಾಡಿ ಆರೋಪಿಗಳನ್ನು ಬಂಧಿಸಿದೆ.
–ಲಕ್ಷ್ಮಣ್ ನಿಂಬರಗಿ, ಎಸ್ಪಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.