ಹಂಪಿ (ಹೊಸಪೇಟೆ): ಹಂಪಿ ಕನ್ನಡ ವಿಶ್ವವಿದ್ಯಾಲಯದ 26ನೇ ‘ನುಡಿಹಬ್ಬ’ಕ್ಕೆ, ರಾಜ್ಯಪಾಲ ವಜುಭಾಯಿ ವಾಲಾ ಹಾಗೂ ‘ನಾಡೋಜ’ ಗೌರವ ಸ್ವೀಕರಿಸಬೇಕಿದ್ದ ಸರೋದ್ ವಾದಕ ಪಂಡಿತ್ ರಾಜೀವ ತಾರಾನಾಥ ಶನಿವಾರ ಗೈರು ಹಾಜರಾಗಿದ್ದರು.
‘ಕಾರಣಾಂತರಗಳಿಂದ ರಾಜ್ಯಪಾಲರು ಬಂದಿಲ್ಲ. ಅನಾರೋಗ್ಯದಿಂದಾಗಿ, ರಾಜೀವ ತಾರಾನಾಥ ಅವರಿಗೆ ಬರಲು ಸಾಧ್ಯವಾಗಿಲ್ಲ. ಹಾಗಾಗಿ ಅವರ ಮನೆಗೆ ಹೋಗಿ ನಾಡೋಜ ಗೌರವ ಪ್ರದಾನ ಮಾಡಲಾಗುವುದು’ ಎಂದು ಕುಲಪತಿ ಪ್ರೊ. ಮಲ್ಲಿಕಾ ಎಸ್. ಘಂಟಿ ತಿಳಿಸಿದರು.
ರಾಜ್ಯಪಾಲರ ಅನುಪಸ್ಥಿತಿಯಲ್ಲಿ, ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ನುಡಿಹಬ್ಬಕ್ಕೆ ಚಾಲನೆ ನೀಡಿ, ಪಿಎಚ್.ಡಿ ಪದವಿ ಪ್ರದಾನ ಮಾಡಿದರು.