ಅವರೇನು ತುಂಬಾ ಕಲಿತವರಾ? ಅಲ್ಲ. ಓದು, ಬರಹ ಗೊತ್ತು ಅಷ್ಟೇ. ಅವರಿಗೆ ಮಾಡಲು ಬರುತ್ತಿದ್ದ ಕೆಲಸವಾದರೂ ಏನು? ಅಡಿಗೆ ಬಿಟ್ಟು ಬೇರೇನೂ ಗೊತ್ತಿಲ್ಲ. ಆದರೂ ಕೇವಲ ಒಂದು ಕನಸು, ಒಂದು ಗುರಿ, ಒಂದು ಛಲ ಅವರನ್ನು ಹಾಗೂ ಅವರ ಸಂಗಡಿಗರನ್ನು ಈ ಮಟ್ಟಕ್ಕೆ ಏರಿಸಿತು.
ಈ ಸಂಸ್ಥೆ ಪ್ರಾರಂಭವಾದಾಗ ಬಂದ ತೊಂದರೆಗಳು ಒಂದೇ, ಎರಡೇ? ಮುಂಬೈಯ ಮಳೆಗಾಲದಲ್ಲಿ ೪ ತಿಂಗಳು ತಯಾರಿಕೆಯನ್ನು ನಿಲ್ಲಿಸಬೇಕಾಯಿತು. ಸದಸ್ಯೆಯರ ಸಂಖ್ಯೆ ಹೆಚ್ಚ್ಚಾದಾಗ ಮನೆಯ ಮಾಳಿಗೆ ಸಾಲದಾಯಿತು. ಎಲ್ಲದಕ್ಕೂ ಸರಳವಾಗಿ ಉತ್ತರವನ್ನು ಕಂಡುಕೊಂಡರು. ಮಳೆಗಾಲದಲ್ಲಿ ಮನೆಯ ಒಳಗೆ ಮಂಚದ ಮೇಲೆ ಹಪ್ಪಳಗಳನ್ನು ಹರವಿ ಕೆಳಗೆ ಸ್ಟವ್ ಹಚ್ಚ್ಚಿ ಒಣಗಿಸುವುದು, ಜನ ಜಾಸ್ತಿ ಆದಾಗ ಹಿಟ್ಟನ್ನು ತಮ್ಮ ತಮ್ಮ ಮನೆಗಳಿಗೆ ಕೊಂಡೊಯ್ದು ಮರುದಿನ ಹಪ್ಪಳಗಳನ್ನು ತಂದಿರುಸುವುದು, ಇತ್ಯಾದಿ.