ನವದೆಹಲಿ: ಅನುಭವಿ ಆಫ್ಸ್ಪಿನ್ನರ್ ಆರ್.ಅಶ್ವಿನ್, ಇರಾನಿ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ಇತರೆ ತಂಡದಲ್ಲಿ ಆಡಲಿದ್ದಾರೆ.
ಈ ಮೊದಲು ತಂಡದಲ್ಲಿದ್ದ ಆಲ್ರೌಂಡರ್ ರವೀಂದ್ರ ಜಡೇಜ ಅವರು ಗಾಯಗೊಂಡಿದ್ದು ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಆದ್ದರಿಂದ ಅಶ್ವಿನ್ಗೆ ಅವಕಾಶ ಸಿಕ್ಕಿದೆ.
ಮಾರ್ಚ್ 14ರಿಂದ 18ರವರೆಗೆ ನಾಗಪುರದಲ್ಲಿ ನಡೆಯುವ ಇರಾನಿ ಕಪ್ ಪಂದ್ಯದಲ್ಲಿ ಭಾರತ ಇತರೆ ತಂಡ ರಣಜಿ ಚಾಂಪಿಯನ್ ವಿದರ್ಭ ಎದುರು ಸೆಣಸಲಿದೆ.
ಗಾಯಗೊಂಡಿದ್ದ ಅಶ್ವಿನ್, ದೇವಧರ್ ಟ್ರೋಫಿಯಲ್ಲಿ ಕಣಕ್ಕಿಳಿದಿರಲಿಲ್ಲ. ಈಗ ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ.
‘ಜಡೇಜ ಗಾಯಗೊಂಡಿದ್ದು, ವೈದ್ಯರು ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ. ಹೀಗಾಗಿ ಇರಾನಿ ಕಪ್ನಲ್ಲಿ ಆಡುತ್ತಿಲ್ಲ. ಅವರ ಬದಲಿಗೆ ಅಶ್ವಿನ್ಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ’ ಎಂದು ಬಿಸಿಸಿಐ ತಿಳಿಸಿದೆ.