ಕಲಬುರ್ಗಿ: ನನ್ನನ್ನು ಹೆದರಿಸುವ ಪ್ರಯತ್ನಗಳು ನಡೆದಿವೆ. ಅನಾಮಿಕರಿಂದ ಬೆದರಿಕೆ ಕರೆಗಳು ಬರುತ್ತಿವೆ ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ದೆಹಲಿಯ ತುಘಲಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಮತ್ತು ಲೋಕಸಭೆಯ ಸ್ಪೀಕರ್ ಸುಮಿತ್ರಾ ಮಹಾಜನ್ ಅವರ ಗಮನಕ್ಕೂ ತಂದಿದ್ದೇನೆ ಎಂದು ಭಾನುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಒಂದೂವರೆ ತಿಂಗಳಿನಿಂದ ದೂರವಾಣಿ ಮೂಲಕ ಬೆದರಿಕೆ ಹಾಕಲಾಗುತ್ತಿದೆ. ನಾನು ಆರು ವರ್ಷದವನಿದ್ದಾಗಲೇ ಸಾಯಬೇಕಿತ್ತು. ಆದರೆ, 76 ವರ್ಷ ಬದುಕಿದ್ದೇನೆ. ಜನರ ಪ್ರೀತಿ,ವಿಶ್ವಾಸದಿಂದ ಇಷ್ಟು ದಿನ ಬದುಕಿದ್ದೇನೆ ಎಂದರು.
ಖೇಣಿ ಸೇರ್ಪಡೆಗೆ ಅಸಮಾಧಾನ: ಶಾಸಕ ಅಶೋಕ್ ಖೇಣಿ ಕಾಂಗ್ರೆಸ್ ಸೇರ್ಪಡೆಗೆ ಖರ್ಗೆ ಅಸಮಾಧಾನ ಹೊರಹಾಕಿದರು. ಖೇಣಿ ಕಾಂಗ್ರೆಸ್ ಪಕ್ಷಕ್ಕೆ ಯಾಕೆ ಬಂದಿದ್ದಾರೆ ಎಂಬುದು ಗೊತ್ತಿಲ್ಲ. ಅವರನ್ನ ಪಕ್ಷಕ್ಕೆ ಕರೆತಂದವರೇ ಹೇಳಬೇಕು. ಖೇಣಿಯಿಂದ ಏನು ಲಾಭ ಅಂತಾ ಅವರೇ ಹೇಳಬೇಕು. ಈ ಬಗ್ಗೆ ಹೆಚ್ಚೇನೂ ಹೇಳುವುದಿಲ್ಲ ಎಂದು ಪ್ರತಿಕ್ರಿಯಿಸಿದರು.